ಬೆಂಗಳೂರಿನಲ್ಲಿ ಮಳೆ ಹಾನಿಯಿಂದ ನಲುಗಿರುವ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಲೋಕಾಯುಕ್ತ ಬಿಎಸ್ ಪಾಟೀಲ್ ಅವರು ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಚಾರಣೆ ನಡೆಸಿ ಬಿಬಿಎಂಪಿ ಬಿಡಬ್ಲ್ಯುಎಸ್ಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಲೋಕಾಯುಕ್ತರು ಬಿಬಿಎಂಪಿ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.
ಮುಂದಿನ ವಿಚಾರಣೆಯನ್ನು ಜೂನ್ ಮೂರಕ್ಕೆ ಮುಂದೂಡಿ, ಮುಂದಿನ ವಿಚಾರಣೆ ವೇಳೆಗೆ ಎಲ್ಲಾ ವರದಿ ನೀಡಲು ಸೂಚಿಸಿದ್ದಾರೆ. ಬಿಬಿಎಂಪಿ ಹಾಗೂ ಬಿಡಬ್ಲ್ಯುಎಸ್ಬಿ ಅಧಿಕಾರಗಳು ಚರಂಡಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಬೇಕು, ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗಳ ಬಗ್ಗೆ ವರದಿ ನೀಡಬೇಕು, ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಿಸಿಕೊಳ್ಳಬೇಕು, ಮಳೆಗಾಲದ ಸಿದ್ಧತೆಯ ವರದಿ ನೀಡಬೇಕು, ಕೆರಗಳ ನಿರ್ವಹಣೆ ವರದಿ ಕೊಡಬೇಕು, ಮಳೆ ಹಾನಿ ಜಾಗದಲ್ಲಿ ಕೆಲಸ ನಿರ್ವಹಿಸಿರಬೇಕು, ನೀರು ನಿಲ್ಲುವ ಜಾಗಗಳಲ್ಲಿ ಮಳೆಗಾಲದ ಸಿದ್ಧತೆ ಮಾಡಬೇಕು, ಈ ಎಲ್ಲಾ ಕಾಮಗಾರಿಗಳ ವರದಿ ನೀಡಬೇಕು ಎಂದು ಸೂಚಿಸಿದ್ದು, ಇದಾದ ಬಳಿಕ ಮತ್ತೊಮ್ಮೆ ಲೋಕಾಯುಕ್ತರು ಪರಿಶೀಲನೆ ನಡೆಸಲಿದ್ದಾರೆ.