ಕರ್ನಾಟಕ ಅತ್ಯುತ್ತಮ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಮಾನವ ಸಂಪನ್ಮೂಲವನ್ನು ಹೊಂದಿದ್ದು, ಬೆಂಗಳೂರು ಜೊತೆಗೆ ಕರ್ನಾಟಕ ಹೂಡಿಕೆ ಮಾಡಲು ಅತ್ಯುತ್ತಮ ಪ್ರದೇಶವಾಗಿದೆ. ನಾವೆಲ್ಲರೂ ಸೇರಿ ಕರ್ನಾಟಕವನ್ನು ಜಾಗತಿಕ ಕೇಂದ್ರವಾಗಿ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯ ಪಟ್ಟರು.
ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಶಿವಕುಮಾರ್ ಮಾತನಾಡಿ, ಬೆಂಗಳೂರು ನಗರ ಸ್ಟಾರ್ಟ್ಅಪ್ ಗಳನ್ನು ಸ್ಥಾಪಿಸುವ ಯುವ ಉದ್ಯಮಿಗಳಿಗೆ ಪ್ರಿಯ ನಗರ.ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕವೇ ಮೊದಲ ಆಯ್ಕೆ ಎಂದರು.
ನಂಜುಂಡಪ್ಪ ವರದಿಯ ಅನ್ವಯದಂತೆ ಒಂದಷ್ಟು ಹಿಂದುಳಿದ ತಾಲೂಕುಗಳು ಹಾಗು ಪ್ರದೇಶಗಳನ್ನು ಗುರುತಿಸಲಾಗಿದೆ. ನೀವು ಅಲ್ಲಿ ಉದ್ದಿಮೆಗಳನ್ನು ಸ್ಥಾಪಿಸಬೇಕು. ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ಮುಟ್ಟಿದೆ. ವಾಹನಗಳ ಸಂಖ್ಯೆ 1.1 ಕೋಟಿ ಮುಟ್ಟಿದೆ. ಹೊರ ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪನೆ ಮಾಡಿದರೆ ಹೆಚ್ಚಿನ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕವನ್ನು ನವ ನಾವೀನ್ಯತೆಯ, ಹೂಡಿಕೆ ಸ್ನೇಹಿ ಮತ್ತು ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ಬೆಳೆಯುವ ರಾಜ್ಯವಾಗಿ ಮಾಡಬೇಕಿದೆ. 1904 ರಲ್ಲಿ ಮೊದಲ ವಿದ್ಯುತ್ ದೀಪ ಬೆಳಗಿದ ನಗರ ಬೆಂಗಳೂರು. ಭಾರತದ ಪ್ರಮುಖ ಬಾಹ್ಯಾಕಾಶ ಉಪಗ್ರಹವನ್ನು ಅಭಿವೃದ್ಧಿಪಡಿದ ನಗರ. ವಿಶ್ವದ ಕೆಲವು ಪ್ರಮುಖ ತಂತ್ರಜ್ಞಾನ ಕಂಪನಿಗಳು ಜನಿಸಿದ ನಗರ ಬೆಂಗಳೂರು. ಬೆಂಗಳೂರು ಭಾರತದ ಭವಿಷ್ಯವನ್ನು ಮುನ್ನಡೆಸುವ ಆರ್ಥಿಕ ಶಕ್ತಿ ಕೇಂದ್ರ ಎನ್ನುವುದರಲ್ಲಿ ಸಂದೇಹವಿಲ್ಲ. ಬೆಂಗಳೂರು ನಾವೀನ್ಯತೆ, ಪ್ರತಿಭೆ ಮತ್ತು ಡಿಜಿಟಲ್ ನಾಯಕತ್ವದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಎಲ್ಲರ ಭವಿಷ್ಯವನ್ನು ಉತ್ತಮಗೊಳಿಸಲು ನಾವು, ನೀವು ಒಟ್ಟಾಗಿ ಸಾಗಬೇಕಿದೆ ಶಿವಕುಮಾರ್ ಎಂದು ಹೇಳಿದರು.
ಖಾಸಗಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಪಿಪಿಪಿ ಮಾದರಿ ಅಳವಡಿಸಲಾಗುವುದು. ಕರ್ನಾಟಕವನ್ನು ಜ್ಞಾನ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಉದ್ದೇಶ. ನಮ್ಮ ಭವಿಷ್ಯ ಮಾತ್ರವಲ್ಲದೆ ಭವಿಷ್ಯದ ಪೀಳಿಗೆಯನ್ನು ರೂಪಿಸುವುದಕ್ಕಾಗಿ ಸೇರಿದ್ದೇವೆ. ಪ್ರಪಂಚದ ಹಲವೆಡೆಗಳಿಂದ ಅನೇಕ ಕನಸುಗಳನ್ನು ಹೊತ್ತು ಜನರು ಬೆಂಗಳೂರಿಗೆ ಬರುತ್ತಾರೆ. ಸಾಂಸ್ಕೃತಿಕ, ಆಧ್ಯಾತ್ಮಿಕ, ಐತಿಹಾಸಿಕವಾಗಿ ನಮ್ಮ ರಾಜ್ಯ ರಾಜಧಾನಿ ಶ್ರೀಮಂತವಾಗಿದೆ. ಈ ಸಮಾವೇಶದ ಮೂಲಕ ಕರ್ನಾಟಕಕ್ಕೆ ಎಲ್ಲಾ ಹೂಡಿಕೆದಾರರನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.
ಕರ್ನಾಟಕವು ವಿಶ್ವ ದರ್ಜೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಬೆಂಗಳೂರು ನಗರವು ಉತ್ತಮ ಮಾನವ ಸಂಪನ್ಮೂಲವನ್ನು ಹೊಂದಿದೆ. ಅಲ್ಲಿ ಅತಿ ಹೆಚ್ಚು ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ಪ್ಯಾರಾ ಮೆಡಿಕಲ್ಗಳು, ಎಂಬಿಎ ಮತ್ತು ಕಾನೂನು ಕಾಲೇಜುಗಳಿವೆ. ವಿಶ್ವದ ಯಾವುದೇ ನಗರದಲ್ಲೂ ಇಷ್ಟರ ಮಟ್ಟಿಗೆ ಶಿಕ್ಷಣ ಸಂಸ್ಥೆಗಳು ಕಂಡು ಬರುವುದಿಲ್ಲ ಎಂದರು.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ -2 ವಿಶ್ವದ ಅತ್ಯುತ್ತಮ ಹೊಸ ಟರ್ಮಿನಲ್. ವರ್ಷಕ್ಕೆ 40 ಮಿಲಿಯನ್ ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸಲಾಗುತ್ತಿದೆ. ವಸತಿ ಉದ್ದಿಮೆ ಮೇಲೆ ಹೆಚ್ಚು ಹೂಡಿಕೆ ಮಾಡಬಹುದಾದ ಪ್ರದೇಶ ಬೆಂಗಳೂರು. ಶೇ. 25 ರಷ್ಟು ಹೂಡಿಕೆ ಕಚೇರಿ ಸ್ಥಳಗಳಿಗೆ ಮೀಸಲಾಗಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಇಂದು ಹಲವಾರು ಉದ್ದಿಮೆದಾರರು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಒಡಂಬಡಿಕೆ ಮಾಡಿ ಕೊಂಡರು. ನಮ್ಮಲ್ಲಿ 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಶಾಲೆಗಳು, ಟೆಕ್ ಪಾರ್ಕ್ ಗಳು, 50ಕ್ಕೂ ಹೆಚ್ಚು ಫೈವ್ ಸ್ಟಾರ್ ಹೋಟೆಲ್ಗಳು ಇವೆ. ಭಾರತದ ಪಬ್ ರಾಜಧಾನಿ ಎಂದು ಬೆಂಗಳೂರನ್ನು ಕರೆಯುತ್ತೇನೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವನಾಗಿ ಟನಲ್ ರಸ್ತೆ ಯೋಜನೆ, ಡಬಲ್ ಡೆಕ್ಕರ್ ಮೆಟ್ರೋ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿವೆ 500 ಕೋಟಿ ವೆಚ್ಚದಲ್ಲಿ ಸ್ಕೈ ಡೆಕ್, ಬೆಂಗಳೂರು ಬಿಜಿನೆಸ್ ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು, ಕೆಲವೇ ದಿನದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಜಾಗವನ್ನು ಘೋಷಣೆ ಮಾಡಲಾಗುವುದು. ನಿಮ್ಮ ಸಿಎಸ್ಆರ್ ನಿಧಿಯನ್ನು ಶಿಕ್ಷಣಕ್ಕೆ ನೀಡಿ. ಪ್ರಾರ್ಥಮಿಕ ಶಿಕ್ಷಣಕ್ಕಾಗಿ ನೀವು ಹಣ ನೀಡಿದರೆ ನಾವು ಭೂಮಿ ನೀಡುತ್ತೇವೆ. ಅಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಾಣ ಮಾಡಬಹುದು. ಕರ್ನಾಟಕವನ್ನು ಇನ್ನಷ್ಟು ಶೈಕ್ಷಣಿಕವಾಗಿ ಸಬಲಗೊಳಿಸಲು ನಿಮ್ಮ ಸಹಕಾರ ಅಗತ್ಯ ಎಂದರು.
ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇಂಧನ ಸಚಿವ ಕೆಜೆ ಜಾರ್ಜ್ ಉಪಸ್ಥಿತರಿದ್ದು ನನ್ನ ಪ್ರಕಾರ 10 ಲಕ್ಷ ಕೋಟಿ ಬಂಡವಾಳ ಹರಿವಿನ ನಿರೀಕ್ಷೆಯಿದೆ. ಹೆಚ್ಚಿನ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸುವುದು, ಪೂರೈಕೆ ಸರಪಳಿಗಳನ್ನು ಬಲಪಡಿಸಿ ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಸಕ್ರಿಯಗೊಳಿಸುವುದು ನಮ್ಮ ಸರ್ಕಾರದ ಮುಂದಿರುವ ಗುರಿ ಎಂದು ಶಿವಕುಮಾರ್ ಹೇಳಿದರು.