ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಲೂನ್ ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದೆ.
ಗುರುವಾರ ರಾತ್ರಿ ಸಲೂನ್ ಸಿಬ್ಬಂದಿ ಸಂಜು ಎಂಬಾತನ ಮೇಲೆ ಲೇಡಿ ರೌಡಿ ಹಲ್ಲೆ ನಡೆಸಿದ್ದು, ಬಳಿಕ ಕಿಡ್ನ್ಯಾಪ್ ಮಾಡಿ ಚಿತ್ರ ಹಿಂಸೆ ನೀಡಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಸಿಗರೇಟ್ ಸೇದುತ್ತಾ ಸಂಜುವಿಗೆ ಕಾಲಿಂದ ಒದ್ದು ಕಾವ್ಯ ಎಂಬಾಕೆ ಗ್ಯಾಂಗ್ ಜೊತೆಗೆ ಆತನ ತಲೆ, ಬೆನ್ನು, ಮುಖಕ್ಕೆ ಹಿಗ್ಗಾಮುಗ್ಗ ಥಳಿಸಿದ್ದಾಳೆ.
ಮೊದಲು ಕೆಲಸ ಮಾಡ್ತಿದ್ದ ಸ್ಪಾ ನಲ್ಲಿ ಕೆಲಸ ಬಿಟ್ಟು, ಹೊಸ ಸಲೂನ್ ಮಾಡಿದ್ದಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕಾವ್ಯ, ಮಹ್ಮದ್, ಸ್ಮಿತಾ ಮತ್ತು ಇಬ್ಬರು ಅಪರಿಚಿತರ ಮೇಲೆ ಅಮೃತಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳು ನೀಲಿ ಬಣ್ಣದ ಶಿಫ್ಟ್ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆಂದು ಸಂಜು ದೂರಿನಲ್ಲಿ ವಿವರಿಸಿದ್ದಾರೆ..
ದಾಸರಹಳ್ಳಿ ಮುಖ್ಯ ರಸ್ತೆ ಮುಖಾಂತರ ಜಕ್ಕೂರು ಕಡೆ ಕರೆದುಕೊಂಡು ಹೋಗಿ ಮಚ್ಚು, ಡ್ರ್ಯಾಗನ್, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೇನೆಂದು ಬೆದರಿಕೆ ಹಾಕಿರುವುದಾಗಿ ಸಂಜು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಿಡ್ನಾಪ್ ಮಾಡಿದ್ದ ಗ್ಯಾಂಗ್ ನಲ್ಲಿದ್ದವರನ್ನು ಪತ್ತೆ ಹಚ್ಚಿ, ಅಮೃತಹಳ್ಳಿ ಪೊಲೀಸರು ಕರೆ ಮಾಡಿದ ಬಳಿಕ ಪೊಲೀಸ್ ಠಾಣೆಯ ಬಳಿ ಸಂಜುನನ್ನು ಗ್ಯಾಂಗ್ ಬಿಟ್ಟು ಹೋಗಿದೆ.