ಹೋದ ಸಲ ಐದು ವರ್ಷವಾದರೂ ಅವರನ್ನು ಏನೂ ಮಾಡಲು ಆಗಲಿಲ್ಲ. ಅವರಾಗಿಯೇ ಪದತ್ಯಾಗ ಮಾಡಬೇಕೇ ಹೊರತು ಬಲವಂತ ಮಾಡಲು ಸಾಧ್ಯವಿಲ್ಲ. ಹಾಲುಮತ ಸಮಾಜಕ್ಕೆ ಘನತೆ, ಗೌರವವಿದೆ, ಅಧಿಕಾರ ಬಂದರೆ, ವಾಪಸ್ ತೆಗೆದುಕೊಳ್ಳುವುದು ಕಷ್ಟ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಚಿವ ಸಂಪುಟ ವಿಸ್ತರಣೆಯ ವಿಚಾರ ಮುನ್ನಲೆಯಲ್ಲಿ ಇರುವ ಸಂದರ್ಭದಲ್ಲಿ, ಕೋಡಿಮಠದ ಶ್ರೀಗಳು ಹಿಂದೆ ತಾವು ನುಡಿದಿದ್ದ ಭವಿಷ್ಯವನ್ನು ಪುನರುಚ್ಚರಿಸಿದ್ದಾರೆ. ಈಗ ಅವರು ಮತ್ತೆ ರಾಜ್ಯವನ್ನು ಆಳುತ್ತಿದ್ದಾರೆ, ಅವರನ್ನು ಬಿಡಿಸುವುದು ಕಷ್ಟ, ಅವರಾಗಿಯೇ ಬಿಡಬೇಕು ಎನ್ನುವ ಮೂಲಕ ಕೋಡಿಮಠದ ಶ್ರೀ, ಸಿದ್ದರಾಮಯ್ಯನವರು ಅವರಾಗಿಯೆ ಇಳಿಯಬೇಕೇ ಹೊರತು ಇಳಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲಿ ಕೋಡಿಶ್ರೀಗಳು, ಕಳೆದ ಯುಗಾದಿಯ ವೇಳೆ ಭವಿಷ್ಯವನ್ನು ನುಡಿದಿದ್ದರು, ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ ಎಂದು ಕೋಡಿಶ್ರೀಗಳು ಹೇಳಿದ್ದಾರೆ. ಈಗ ಮತ್ತದೆ ಅದೇ ಮಾತನ್ನು ಹೇಳಿದ್ದಾರೆ.
ಉತ್ತರದ ನಾಡಿನಲ್ಲಿ ಹಗೆಯ ಬೇಗೆ ಎದ್ದೀತು, ಸುತ್ತುವರಿದು ಬರುವಾಗ ಜಗವೆಲ್ಲಾ ಕೋಳಾದೀತು, ಮತೀಯ ಗಲಭೆಗಳು ಹೆಚ್ಚಾಗಿ ಜನರಲ್ಲಿ ಅಶಾಂತಿ ಮೂಡುತ್ತದೆ ಎಂದು ಹಿಂದೆ ಹೇಳಿದ್ದೆ. ಹಿಂದೆಲ್ಲಾ ರಾಜರು, ಮಹಾರಾಜರು, ಚಕ್ರವರ್ತಿಗಳು ಇದ್ದರು. ಅವರು ಒಂದು ಸ್ಥಾನವನ್ನು ಗುರುಗಳಿಗಾಗಿ ಮೀಸಲಿಡುತ್ತಿದ್ದರು. ಅವರು ಕೊಡುವ ಮಾರ್ಗದರ್ಶನದಲ್ಲಿ ಸಾಗುತ್ತಿದ್ದರು, ರಾಜ್ಯಭಾರ ಮಾಡುತ್ತಿದ್ದರು. ಈಗೆಲ್ಲಾ ಅದು ಇಲ್ಲ ಎಂದು ಕೋಡಿಶ್ರೀಗಳು ಹೇಳಿದ್ದಾರೆ.
ನಾವು ಸನ್ಯಾಸಿಗಳು, ಯಾವ ದೇಶದಲ್ಲಿ ಇರುತ್ತೇವೆ, ಯಾವ ಮಣ್ಣಿನಲ್ಲಿ ಇರುತ್ತೇವೆ, ಎಲ್ಲಿ ಅನ್ನ ತಿನ್ನುತ್ತೇವೆ ಅಲ್ಲಿಗೆ ಒಳ್ಳೆದಾಗಬೇಕು ಎಂದು ನಾವು ಪ್ರಾರ್ಥನೆಯನ್ನು ಮಾಡುತ್ತೇವೆ. ಅಕಾಲದಲ್ಲಿ ಮಳೆ ಬರುತ್ತಿರುವುದರಿಂದ, ಸಕಾಲದಲ್ಲಿ ಮಳೆ ಬರದೆ ಇರಬಹುದು ಎಂದಿದ್ದಾರೆ.
ಹಾಲುಮತದವರ ಬಳಿ ಅಧಿಕಾರ ಇದ್ದರೆ ವಾಪಸ್ ತೆಗೆದುಕೊಳ್ಳುವುದು ಕಷ್ಟ. ಅವರಾಗಿಯೇ ಕೊಟ್ಟರೆ ಬದಲಾಗಬಹುದೇ ಹೊರತು ಇಲ್ಲದಿದ್ದರೆ ಸಾಧ್ಯವಿಲ್ಲ ಎಂದು ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಹಾಲುಮತ ಸಮಾಜದಲ್ಲಿ ಲೋಕೋತ್ತರ ಕಾಣಿಕೆಗಳು ಇದ್ದಾವೆ, ಅವರಿಗೆ ದೈವಬಲವಿದೆ ಎಂದು ಕೋಡಿಶ್ರೀಗಳು ಹೇಳಿದ್ದಾರೆ.