ಬೆಂಗಳೂರಿನ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಿದರು. ಇದೇ ವೇಳೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ ಅವರು ಕೆಐಎಡಿಬಿಯ ಎರಡು ಕೋಟಿ ರೂ. ಲಾಭಾಂಶವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು.
ಗಾಂಧಿನಗರದ ಆಚಾರ್ಯ ತುಳಸಿ ಮಾರ್ಗದಲ್ಲಿ ರೂ 32 ಕೋಟಿ ವೆಚ್ಚದಲ್ಲಿ ಈ ಬಹುಮಹಡಿ ಕಟ್ಟಡವನ್ನು ನಿರ್ಮಿಸಲಾಗಿದೆ. ಒಟ್ಟು 2,618 ಚದರ ಮೀಟರ್ ಅಳತೆಯ ನಿವೇಶನದಲ್ಲಿ ತಲೆಯೆತ್ತಿರುವ ಈ ಕಟ್ಟಡವು ಎರಡು ನೆಲ ಅಂತಸ್ತುಗಳು, ನೆಲ ಅಂತಸ್ತು, ಐದು ಮಹಡಿಗಳು ಹಾಗೂ ತಾರಸಿ ಮಹಡಿಯನ್ನು ಒಳಗೊಂಡಿದೆ. ಲೋಯರ್ ಬೇಸ್ ಮೆಂಟ್ ನಲ್ಲಿ 58 ಕಾರುಗಳು ಹಾಗೂ ಅಪ್ಪರ್ ಬೇಸ್ ಮೆಂಟ್ ನಲ್ಲಿ 38 ಕಾರುಗಳ ನಿಲುಗಡೆಗೆ ಜಾಗ ಕಲ್ಪಿಸಲಾಗಿದೆ.
ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಈ ಕಟ್ಟಡ ಕಟ್ಟಲು ಶಾಸಕ ಆರ್.ವಿ.ದೇಶಪಾಂಡೆ ತೀರ್ಮಾನ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನೂ ಸನ್ಮಾನಿಸ ಲಾಯಿತು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ ಮತ್ತಿತರರು ಇದ್ದರು.


