ಜಮ್ಮು: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಸೋಮವಾರ ನಿರ್ಣಯ ಅಂಗೀಕರಿಸಿದೆ. ದಾಳಿ ಹಿನ್ನೆಲೆಯಲ್ಲಿ ಕರೆದಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ವೇಳೆ ಸರ್ವಪಕ್ಷಗಳು ಉಗ್ರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು.
ಕೋಮು ಸಾಮರಸ್ಯವನ್ನು ಕದಡುವ ಮತ್ತು ಪ್ರಗತಿಗೆ ಅಡ್ಡಿಯಾಗುವ ದುಷ್ಟ ಶಕ್ತಿಗಳನ್ನು ಮಟ್ಟಹಾಕಲು ದೃಢನಿಶ್ಚಯದಿಂದ ಹೋರಾಡಲು ವಿಧಾನಸಭೆ ನಿರ್ಧರಿಸಿತು. ಕಳೆದ ವಾರ ನಡೆದ ದಾಳಿಯಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಎಲ್ಲ ಸದಸ್ಯರು 2 ನಿಮಿಷಗಳ ಮೌನ ಆಚರಿದರು. ಬಳಿಕ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಅವರು ನಿರ್ಣಯ ಮಂಡಿಸಿದರು.
“ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ತನ್ನ ಎಲ್ಲಾ ನಾಗರಿಕರಿಗೆ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯ ವಾತಾವರಣವನ್ನು ನಿರ್ಮಿಸಲು, ದೇಶ ಮತ್ತು ಜಮ್ಮು-ಕಾಶ್ಮೀರದದಲ್ಲಿ ಕೋಮು ಸಾಮರಸ್ಯಕ್ಕೆ ಭಂಗಗೊಳಿಸಲು ಪ್ರಯತ್ನಿಸುವವರ ವಿರುದ್ಧ ಹೋರಾಡಲಿದೆ” ಎಂದು ಹೇಳಿದರು.
ದಾಳಿ ಹೇಡಿತನದ ಕೃತ್ಯ: ”
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಾಗರಿಕರ ಮೇಲೆ ನಡೆದಿರುವುದು ಅನಾಗರಿಕ ಮತ್ತು ಅಮಾನವೀಯ ದಾಳಿಯಾಗಿದೆ. ಮುಗ್ಧ ಜೀವಗಳ ಬಲಿ ಪಡೆದಿದ್ದು, ಹೇಯ, ಹೇಡಿತನದ ಕೃತ್ಯ” ಎಂದು ಜರಿದರು. “ಈ ಸದನವು ಬಲಿಪಶುಗಳು ಮತ್ತು ಅವರ ಕುಟುಂಬಗಳೊಂದಿಗೆ ಸಂಪೂರ್ಣ ಒಗ್ಗಟ್ಟಿನಿಂದ ನಿಲ್ಲುತ್ತದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತೇವೆ. ಅವರ ದುಃಖದಲ್ಲಿ ನಾವೂ ಭಾಗಿದಾರರು” ಎಂದು ಉಪ ಮುಖ್ಯಮಂತ್ರಿ ಹೇಳಿದರು.