2025ನೇ ಸಾಲಿನ ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಕಾಲಕ್ಕೆ ತಕ್ಕಂತೆ ಹಂತ-ಹಂತವಾಗಿ ಬದಲಾವಣೆಯನ್ನು ನಿರಂತರವಾಗಿ ತರಲಾಗುತ್ತಿದೆ. ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಸುಧಾರಣೆ ಮಾಡಲಾಗುತ್ತಿದೆ. ಜನರ ಕಷ್ಟಕ್ಕೆ ಪರಿಹಾರ ನೀಡುವ ಕೆಲಸ ಮಾಡಲಾಗುತ್ತಿದೆ. ಅದರ ಮುಂದುವರೆದ ಪ್ರಯತ್ನವೇ ಈ ನೂತನ ತಿದ್ದುಪಡಿ ವಿಧೇಯಕ. ಈ ವಿಧೇಯಕದ ಮೂಲ ಉದ್ದೇಶವೇ ನೋಂದಣಿ ಸರಳೀಕರಣ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ತಾಂತ್ರಿಕತೆ ಬಳಸಿಕೊಂಡು ಅಧಿಕಾರಿಗಳ ಮಧ್ಯಪ್ರವೇಶವನ್ನು ಸಕ್ರಿಯವಾಗಿ ಕಡಿಮೆ ಮಾಡುವುದಾಗಿದೆ.
ವಿಧೇಯಕ ಸಂಬಂಧ ಸಚಿವ ಕೃಷ್ಣಭೈರೇಗೌಡರು ಸದನಕ್ಕೆ ಮಾಹಿತಿ ನೀಡಿದ್ದು, ನೂತನ ತಿದ್ದುಪಡಿಯ ಮೂಲಕ ಸೆಕ್ಷನ್ 9 (A) ಅಡಿಯಲ್ಲಿ ಕಂಪ್ಯೂಟರ್ ಡಿಜಿಟಲ್ ಸಹಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಉದಾಹರಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒಬ್ಬರಿಗೆ ನಿವೇಶನ ಮಂಜೂರು ಮಾಡಿದರೆ ರಿಜಿಸ್ಟ್ರಾರ್ ಅಧಿಕಾರಿ ಇಲ್ಲದೆಯೂ ಅದನ್ನು ಆಟೋಮ್ಯಾಟಿಕ್ ಆಗಿ ನೋಂದಣಿ ಮಾಡುವಂತಹ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ತಹಶೀಲ್ದಾರ್ 94 ಸಿ 94 ಸಿಸಿ ಯಲ್ಲಿ ಹಕ್ಕುಪತ್ರ ಕಡ್ಡಾಯ ನೋಂದಣಿ ಮಾಡುವ ಅವಕಾಶ ನೀಡಿದ್ದೇವೆ. ನಮೂನೆ 53, 57ರ ಅಡಿಯಲ್ಲಿ ಮಂಜೂರಿದಾರರಿಗೆ ತಹಶೀಲ್ದಾರ್ ಬಗರ್ ಹುಕುಂ ಭೂಮಿ ನೋಂದಣಿ ಮಾಡಿಕೊಡಲು ಸಬ್ ರಿಜಿಸ್ಟ್ರಾರ್ ಅಗತ್ಯ ಇಲ್ಲ. ಮಂಜೂರಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ತಹಶೀಲ್ದಾರ್ ಡಿಜಿಟಲ್ ಆಗಿ ಅಪ್ಲೋಡ್ ಮಾಡಿದರೆ ಆಟೋಮ್ಯಾಟಿಕ್ ಆಗಿ ರಿಜಿಸ್ಟ್ರೇಷನ್ ಆಗಲಿದೆ ಎಂದು ತಿಳಿಸಿದ್ದಾರೆ.
ರೈತರು ತಾವು ಪಡೆದ ಸಾಲ ತೀರಿಸಿದ್ದನ್ನು ಪಹಣಿ ಕಾಲಂ ನಿಂದ ತೆಗೆಯೋಕೂ ಸಹ ಸರ್ಕಾರಿ ಕಚೇರಿಗೆ ಅಲೆಯಬೇಕಾದ ಸ್ಥಿತಿ ಇದೆ. ಕಾಲಂ ನಿಂದ ಹೆಸರು ತೆಗೆಯಲು ಅದಕ್ಕೂ ಹಣ ನೀಡಬೇಕು. ತಂತ್ರಜ್ಞಾನ ಕಾಲದಲ್ಲೂ ಋಣಮುಕ್ತ ದಾಖಲೆ ಪಡೆಯಲೂ ಸಹ ಮಧ್ಯವರ್ತಿಯನ್ನು ಹಿಡಿಯಬೇಕಾದ ದುಸ್ಥಿತಿ ಇದೆ. ಹೀಗಾಗಿಯೇ ನೋಂದಣಿಯನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಈ ನೂತನ ತಿದ್ದುಪಡಿ ತರಲಾಗಿದೆ.
ಖಾತೆಯನ್ನು ಪೇಪರ್ ಮೂಲಕ ತಂದುಕೊಟ್ರೆ ಅದೂ ನಕಲಿ ಆಗುತ್ತೆ. ಹೀಗಾಗಿ ಈ ಎಲ್ಲ ದಾಖಲೆಗಳೂ ಡಿಜಿಟಲ್ ಆಗಿಯೇ ಬರಬೇಕು. ಸೆಕ್ಷನ್ 32ನಲ್ಲಿ ಈ ತಿದ್ದುಪಡಿ ತರಲಾಗಿದೆ. ದಾಖಲೆಗಳು ಡಿಜಿಟಲ್ ಆಗಿ ಪರಿಶೀಲನೆಯಾಗುವಾಗ ರೈತರು ನೇರವಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಅಗತ್ಯ ಇಲ್ಲ. ಹೀಗಾಗಿ ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಅಥವಾ ಜನ ಸಮಾನ್ಯರ ವ್ಯಯಕ್ತಿಕ ಆಗಮನಕ್ಕೂ ವಿನಾಯಿತಿ ನೀಡಲಾಗುತ್ತಿದೆ. ಆದರೆ, ಇಬ್ಬರು ವ್ಯಕ್ತಿಗಳ ನಡುವಿನ ವ್ಯಯಕ್ತಿಯ ಜಿಪಿಎ ಆಧಾರದ ಮೇಲೆ ನಡೆಯುವ ವ್ಯವಹಾರಗಳಿಗೆ ಮಾತ್ರ ಇಬ್ಬರೂ ಆಗಮಿಸಬೇಕಾಗುತ್ತದೆ ಹಾಗೂ ಜಿಪಿಎ ಕಡ್ಡಾಯವಾಗಿ ರಿಜಿಸ್ಟರ್ ಆಗಿರಬೇಕಾಗುತ್ತದೆ.
ಈ ಹಿಂದೆ ಪೇಪರ್ ಖಾತಾ ಮೂಲಕ ನಗರ ಸಭೆ/ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ನಕಲಿ ನೋಂದಣಿ ಮಾಡಲಾಗಿದೆ. ಬಿಬಿಎಂಪಿ ಖಾತೆಯಲ್ಲಂತೂ ಲಕ್ಷಾಂತರ ಫ್ರಾಡ್ ಆಗಿದೆ. ಪೇಪರ್ ದಾಖಲೆ ನಕಲಿ ಆಗಿದ್ದರೂ ಸಹ ಅದನ್ನು ಪರಿಶೀಲಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್ ಅವರಿಗೆ ಇರಲಿಲ್ಲ. ಹೈಕೋರ್ಟ್ ಸಹ ಸಬ್ ರಿಜಿಸ್ಟ್ರಾರ್ ದಾಖಲೆ ವೆರಿಫೈ ಮಾಡುವಂತಿಲ್ಲ ಎನ್ನುತ್ತೆ. ಹೀಗಾಗಿ ನೋಂದಣಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಉದ್ದೇಶದಿಂದ 2023ರಲ್ಲೇ ತಿದ್ದುಪಡಿ ತಂದು ವಿಧೇಯಕವನ್ನು ರಾಷ್ಟ್ರಪತಿ ಒಪ್ಪಿಗೆಗೆ ಕಳುಹಿಸಲಾಗಿತ್ತು. ಆದರೆ, 14 ತಿಂಗಳ ನಂತರ ಆ ವಿಧೇಯಕ ಅಂಗೀಕಾರಗೊಂಡಿದೆ. ಈ ನಡುವೆ ಕಳೆದ ಸೆಪ್ಟೆಂಬರ್ನಿಂದಲೇ ನಾವು ಇದನ್ನೂ ಬಂದ್ ಮಾಡಿದ್ದೇವೆ. ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸಬ್ ರಿಜಿಸ್ಟ್ರಾರ್ ಗೆ ಸೂಚಿಸಲಾಗಿದೆ. ಇನ್ಮುಂದೆ ಆಟೋಮೆಟಿಕ್ ರಿಜಿಸ್ಟ್ರಾರ್ ಆಗಲಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, 11ಇ ಸ್ಕೆಚ್ ಅನ್ನು 2011 ರಲ್ಲೇ ಕಡ್ಡಾಯ ಮಾಡಲಾಗಿದೆ. ಇದು ನಿಜಕ್ಕೂ ಉತ್ತಮ ಕೆಲಸವಾಗಿದ್ದು, ಕಾನೂನಲ್ಲಿ ಅವಕಾಶ ಇಲ್ಲ ಎಂದು ಕೆಲವರು ಅಸಮಾಧಾನ ಹೊರಹಾಕಿದ್ದರು. ಈಗ ಅದನ್ನೂ ಕಾನೂನು ಪರಿಧಿಯೊಳಗೆ ತರಲಾಗಿದೆ. ಹೆಜಕ್ಜೆ ಹೆಜ್ಜೆಗೂ ಬದಲಾವಣೆ ತರುತ್ತಿದ್ದೇವೆ. ಈ ತಿದ್ದುಪಡಿ ಅದರ ಮುಂದುವರೆದ ಭಾಗ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸುವ ಪ್ರಯತ್ನ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.