ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿರುವುದಾಗಿ ಹೇಳಿಕೆ ನೀಡಿರುವ ನಟ ಕಮಲ್ ಹಾಸನ್ಗೆ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದ್ದು, ಕ್ಷಮೆ ಕೇಳಿ ಎಂದು ಹೇಳಿದ್ದಲ್ಲದೆ ನೀವೇನು ಭಾಷಾ ತಜ್ಞರೇ ಎಂದು ಪ್ರಶ್ನಿಸಿದೆ.
ಭಾಷೆ ಹುಟ್ಟಿದ್ದರ ಬಗ್ಗೆ ಮಾತನಾಡುವುದಕ್ಕೆ ನೀವು ಭಾಷಾ ತಜ್ಞರೇ ಅಥವಾ ಇಲ್ಲ ಇತಿಹಾಸಕಾರರೇ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ. ಥಗ್ ಲೈಫ್ ಚಿತ್ರ ಬಿಡುಗಡೆಗೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಮಲ್ ಹಾಸನ್ ಬಿಡುಗಡೆಗೆ ಅವಕಾಶ ನೀಡಬೇಕು ಮತ್ತು ಚಿತ್ರ ಮಂದಿರಕ್ಕೆ ಪೊಲೀಸ್ ಭದ್ರತೆ ಒದಗಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ನಡೆದಿದ್ದು, ಕಮಲ್ ಹಾಸನ್ ಪರ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡನೆ ಮಾಡಿದರು. ಈ ವೇಳೆ ನ್ಯಾಯಮೂರ್ತಿಗಳು, ನೆಲ, ಭಾಷೆಯ ಜೊತೆ ಜನರ ಭಾವನೆ ಇರುತ್ತದೆ. ಜನರ ಭಾವನೆಗೆ ಯಾರೂ ಧಕ್ಕೆ ತರಬಾರದು. ಜನರು ಕ್ಷಮೆ ಕೇಳುವಂತೆ ಒತ್ತಾಯಿಸುತ್ತಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳಿದ್ದಾರಾ ಎಂದು ಪ್ರಶ್ನಿಸಿದರು. ಕ್ಷಮೆ ಕೇಳೋದಕ್ಕೆ ಯಾಕೆ ಇಷ್ಟೊಂದು ಹಾವ ಭಾವ, ಈ ಹಿಂದೆ ರಾಜಗೋಪಾಲಾಚಾರಿ ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆಯಾಚನೆ ಮಾಡಿದ್ದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.
350 ಕೋಟಿ ರೂ. ಸಿನಿಮಾಗೆ ಹಾಕಿದ್ದೀರಿ ಎನ್ನುತ್ತೀರಿ. ಭಾವನೆಗೆ ಧಕ್ಕೆ ಮಾಡಿ ಇಲ್ಲಿ ಸಂಪಾದನೆ ಮಾಡಬೇಕಾ, ಎಲ್ಲವೂ ಸರಾಗವಾಗಿ ಆಗಬೇಕು ಅಂದರೆ ಕ್ಷಮೆ ಕೋರಿ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಭಾವನೆಗೆ ಧಕ್ಕೆ ಆಗಬಾರದು. ಕೋಟ್ಯಂತರ ರೂ. ಹಾಕಿದ್ದೀರಿ, ಕರ್ನಾಟಕದಲ್ಲಿ ಯಾಕೆ ಸಿನಿಮಾ ರಿಲೀಸ್ ಮಾಡುತ್ತೀರಿ, ಕರ್ನಾಟಕವನ್ನು ಬಿಟ್ಟು ಬಿಡಿ ಎಂದು ಕುಟುಕಿದರು.
ಸಿನಿಮಾ ನೋಡುವುದು ಎಲ್ಲರ ಹಕ್ಕು. ಭದ್ರತೆ ನೀಡಲು ಮನವಿ ಮಾಡುತ್ತಿದ್ದೇವೆ. ಏನೋ ಹೇಳಲು ಹೋಗಿ ಏನೋ ಆಗಿದೆ ಎಂದು ಕಮಲ್ ಪರ ವಕೀಲರು ಮನವಿ ಮಾಡಿಕೊಂಡರು. ಚಿತ್ರ ಮಂದಿರಕ್ಕೆ ಭದ್ರತೆ ಬೇಕಾ ಬೇಡ್ವಾ ಎಂದು ಆದೇಶ ಮಾಡುವ ಮೊದಲು ಕ್ಷಮೆ ಕೇಳಲಿ. ಕ್ಷಮೆ ಕೇಳದ ಹೊರತು ಹೇಳಿಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಜಡ್ಜ್ ಸೂಚನೆ ನೀಡಿದರು. ಕಮಲ್ ಪರ ವಕೀಲರಿಗೆ ಕ್ಷಮೆ ಕೇಳಲು ಸೂಚಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಇಂದು ಮಧ್ಯಾಹ್ನ 2:30ಕ್ಕೆ ಮುಂದೂಡಿದರು.