ಬೆಂಗಳೂರಿನಲ್ಲಿ 1,650 ಕೋಟಿ ವೆಚ್ಚ, 60,000 ಆಸನ ಸಾಮರ್ಥ್ಯದ ಸ್ಟೇಡಿಯಂ ನಿರ್ಮಾಣಕ್ಕಾಗಿ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಬೊಮ್ಮಸಂದ್ರದ ಸೂರ್ಯಸಿಟಿಯಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. 1,650 ಕೋಟಿ ರೂಪಾಯಿ ವೆಚ್ಚದಲ್ಲಿ 75 ಎಕರೆಯಲ್ಲಿ 60,000 ಆಸನಗಳ ಸಾಮರ್ಥ್ಯವುಳ್ಳ ಬೃಹತ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಆಗಲಿದ್ದು, ರಾಜ್ಯದ ಅತಿ ದೊಡ್ಡ ಸ್ಟೇಡಿಯಂ ಎಂದು ಕರೆಸಿಕೊಳ್ಳಲಿದೆ. ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ, ಹೊರಾಂಗಣ ಕ್ರೀಡಾಂಗಣಗಳು, ಅತ್ಯಾಧುನಿಕ ಜಿಮ್, ತರಬೇತಿ ಕೌಶಲ್ಯಗಳು, ಒಲಿಂಪಿಕ್ ಗಾತ್ರದ ಈಜು ಕೊಳಗಳು, ಅತಿಥಿ ಗೃಹಗಳು, ಹಾಸ್ಟೆಲ್ಗಳು, ಹೋಟೆಲ್ಗಳು, ಕನ್ವೆನ್ಷನ್ ಹಾಲ್ ಇರುತ್ತವೆ.
ಕೆಲವೇ ತಿಂಗಳುಗಳ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿತ್ತು. 2025ರ ಐಪಿಎಲ್ ಟೂರ್ನಿ ಗೆದ್ದ ರಾಯಲ್ ಚಾಲೆಂಜರ್ಸ್ ತಂಡ ಸಂಭ್ರಮಿಸಲು ಸ್ಟೇಡಿಯಂಗೆ ಬರಲು ಸೂಚಿಸಿತ್ತು. ಸಂಭ್ರಮಾಚರಣೆ ಮಾಡುವಾಗ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟಿದ್ದರು.