ಸೇನೆಯು 9 ಉಗ್ರನೆಲೆಗಳನ್ನು ನಾಶ ಮಾಡಿದ್ದರ ಯಶಸ್ಸಿನಲ್ಲಿ ದೇಶದ ಹೆಮ್ಮೆಯ ಇಸ್ರೊ ಪಾಲು ಕೂಡ ಇದೆ. ಭಾರತೀಯ ವಾಯುಸೇನೆಯ ಪೈಲಟ್ಗಳಿಗೆ ಇಸ್ರೊ ಸಹಾಯ ಮಾಡಿದೆ. ಪಾಕಿಸ್ತಾನದ ಏರ್ಡಿಫೆನ್ಸ್ ಸಿಸ್ಟಂಗಳು ಆ್ಯಕ್ಟಿವ್ ಆಗಿದ್ದವೋ ಇಲ್ಲವೋ ಎಂಬ ಮಾಹಿತಿಗಳನ್ನು ಸೇನೆಗೆ ಇಸ್ರೊ ನೀಡುತ್ತಿತ್ತು ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ಹೇಳಿದ್ದಾರೆ.
ಭಾರತ 2040ರ ವೇಳೆಗೆ ಮೊದಲ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದೆ. ಭಾರತದ ನಾಗರಿಕರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು 24/7 ಕಾಲ 10 ಉಪಗ್ರಹಗಳು ಕಾರ್ಯ ನಿರ್ವಹಿಸುವ ಮೂಲಕ ಕಟ್ಟೆಚ್ಚರ ವಹಿಸಿವೆ ಎಂದು ಹೇಳಲು ನನಗೆ ಸಂತಸವಾಗುತ್ತಿದೆ ಎಂದಿದ್ದಾರೆ.
ಮಣಿಪುರದ ಇಂಫಾಲ್ನಲ್ಲಿ ನಡೆದ ಕೇಂದ್ರ ಕೃಷಿ ವಿವಿಯ 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಶಸ್ತ್ರ ಸಂಘರ್ಷದ ನಡುವೆ ದೇಶದ ಭದ್ರತೆಯಲ್ಲಿ ಉಪಗ್ರಹಗಳು ವಹಿಸುತ್ತಿರುವ ಮಹತ್ತರ ಪಾತ್ರದ ಕುರಿತು ಮಾತನಾಡಿದ್ಧಾರೆ.
ಇದುವರೆಗೆ ಭಾರತ 34 ದೇಶಗಳ 433 ಉಪಗ್ರಹಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ನಮ್ಮ ದೇಶದ ಸುರಕ್ಷತೆಯನ್ನು ನಮ್ಮ ಉಪಗ್ರಹಗಳ ಮೂಲಕ ದೃಢಪಡಿಸಿಕೊಳ್ಳಬೇಕಿದೆ. ದೇಶದ 7,000 ಕಿ.ಮೀ. ಸಮುದ್ರ ತೀರವನ್ನು , ದೇಶದ ಉತ್ತರ ಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕಿದ್ದು, ಉಪಗ್ರಹ ಮತ್ತು ಡ್ರೋನ್ ತಂತ್ರಜ್ಞಾನವಿಲ್ಲದೆ ಅದನ್ನು ಸಾಧಿಸಲು ಸಾಧ್ಯವಿಲ್ಲ. ಜಿ20 ಉಪಗ್ರಹದ ಶೇ.50 ರಷ್ಟು ಪೇಲೋಡ್ ಭಾರತದಿಂದ ಬರಲಿದ್ದು, ಉಳಿದ ಪೇಲೋಡ್ ಇತರ ದೇಶಗಳಿಂದ ಬರಲಿದೆ. ಭಾರತದ ಸ್ವಂತ ಉಡಾವಣಾ ವಾಹನವನ್ನು ಬಳಸಿಕೊಂಡು ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ. ಉಡಾವಣೆ ಬಳಿಕ, ಉಪಗ್ರಹದಿಂದ ಸಂಗ್ರಹಿಸಿದ ಡೇಟಾವನ್ನು ಜಿ20 ದೇಶಗಳೊಂದಿಗೆ ಹಂಚಿಕೊಳ್ಳಲಿದೆ ಎಂದರು.
ಉಪಗ್ರಹಗಳ ಮೂಲಕ ಇಸ್ರೋ ಕೃಷಿ, ಟೆಲಿ-ಶಿಕ್ಷಣ, ಟೆಲಿಮೆಡಿಸಿನ್, ದೂರದರ್ಶನ ಪ್ರಸಾರ, ಹವಾಮಾನ ಮುನ್ಸೂಚನೆ, ಪರಿಸರ ಮೇಲ್ವಿಚಾರಣೆ, ಆಹಾರ ಭದ್ರತೆ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸಾಮಾನ್ಯ ಜನರಿಗೆ ಇಸ್ರೊ ಸೇವೆ ಸಲ್ಲಿಸುತ್ತಿದೆ. ವಿಪತ್ತು ನಿರ್ವಹಣೆ ಮತ್ತು ಆ ಸಮಯದ ಸಮಸ್ಯೆಯನ್ನು ತಗ್ಗಿಸುವಿಕೆಯಲ್ಲಿ ಉಪಗ್ರಹಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ. ಹಿಂದೆ, ವಿಪತ್ತುಗಳು ಸಂಭವಿಸಿದ ಸಮಯದಲ್ಲಿ, ಸಾವಿರಾರು ಜನರು ಪ್ರಾಣ ಕಳೆದು ಕೊಳ್ಳುತ್ತಿದ್ದರೆ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ ಎಂದು ಹೇಳಿದರು.