ಇಸ್ರೇಲ್ ಹಾಗೂ ಇರಾನ್ ನಡುವಿನ ಕದನದಿಂದ ಇರಾನ್ಗೆ ರಫ್ತಾಗಬೇಕಿದ್ದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತದ ಬಂದರುಗಳಲ್ಲೇ ಉಳಿದುಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಮಾಹಿತಿ ನೀಡಿದೆ.
ಸೌದಿ ಅರೇಬಿಯಾದ ನಂತರ ಭಾರತದಿಂದ ಹೆಚ್ಚು ಬಾಸ್ಮತಿ ಅಕ್ಕಿ ಆಮದು ಮಾಡಿಕೊಳ್ಳುವ ರಾಷ್ಟ್ರ ಇರಾನ್. ಕಳೆದ ಹಣಕಾಸು ವರ್ಷದಲ್ಲಿ 10 ಲಕ್ಷ ಟನ್ ಬಾಸ್ಮತಿ ಅಕ್ಕಿ ಭಾರತದಿಂದ ಇರಾನ್ಗೆ ರಫ್ತಾಗಿತ್ತು. ಈಗ ರಫ್ತಾಗಬೇಕಿದ್ದ 18% – 20% ರಷ್ಟು ಬಾಸ್ಮತಿ ಅಕ್ಕಿ ಇಲ್ಲೇ ಉಳಿದಿದೆ. ಇರಾನ್ಗೆ ತೆರಳಬೇಕಿದ್ದ ಅಕ್ಕಿ ತುಂಬಿದ ಹಡಗುಗಳು ಗುಜರಾತ್ನ ಕಾಂಡ್ಲಾ ಹಾಗೂ ಮುಂಡ್ರಾ ಬಂದರಿನಲ್ಲೇ ನಿಲುಗಡೆಯಾಗಿವೆ. ಈ ಸನ್ನಿವೇಶದಲ್ಲಿ ಹಡಗಿನಲ್ಲಿರುವ ಸರಕಿಗೆ ವಿಮೆ ಅನ್ವಯವಾಗದ ಕಾರಣ ರಫ್ತುದಾರರು ನಷ್ಟವಾಗುವ ಆತಂಕದಲ್ಲಿದ್ದಾರೆ.
ಈ ನಡುವೆ ತನ್ನ ಪರಮಾಣು ನೆಲೆಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಒಂದು ದಿನದ ನಂತರ ಇರಾನ್ ಪ್ರತೀಕಾರವಾಗಿ ಕತಾರ್ನ ದೋಹಾ ದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಖಂಡಾಂತರ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ದಾಳಿ ನಡೆದಿದೆ. ಇರಾನ್ನ ಎಲ್ಲ ಕ್ಷಿಪಣಿಗಳನ್ನು ಅಮೆರಿಕ ಸೇನೆ ಸಮರ್ಥವಾಗಿ ಎದುರಿಸಿದ್ದು, ಯಾವುದೇ ಸಾವುನೋವುಗಳಾಗಿಲ್ಲ ಎಂದು ಕತಾರ್ ಹೇಳಿದೆ. ಇದು ಜಾಗತಿಕವಾಗಿ ಮತ್ತಷ್ಟು ಉದ್ವಿಗ್ನತೆ ಹೆಚ್ಚಳವಾಗಲು ಕಾರಣವಾಗಿದೆ.