ಇರಾನ್-ಇಸ್ರೇಲ್ ಯುದ್ಧ ತೀವ್ರಗತಿಯಲ್ಲಿದ್ದು, ಜಗತ್ತಿನ ಹಲವು ದೇಶಗಳಲ್ಲಿ ನಾನಾ ರೀತಿಯ ಸಂಕಷ್ಟಗಳಿಗೆ ಕಾರಣವಾಗಿದೆ. ಪ್ರಮುಖವಾಗಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯಗೊಂಡು ಹೋಟೆಲ್ ಉದ್ಯಮವನ್ನು ಕಂಗೆಡಿಸಿದೆ.
ಬೆಂಗಳೂರು ಸೇರಿದಂತೆ ನಗರಗಳಲ್ಲಿ ಹೋಟೆಲ್, ಪಿಜಿ, ಹಾಸ್ಟೆಲ್ ಮೆನುಗಳೇ ಬದಲಾಗಿವೆ. ಈ ನಡುವೆ ದೇವಸ್ಥಾನಗಳಲ್ಲಿ ಪ್ರಸಾದ ತಯಾರಿಸುವುದಕ್ಕೂ ತೊಡಕುಂಟಾಗಿದೆ. ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇಗುಲದಲ್ಲಿ ಪ್ರಸಾದ ತಯಾರಿಕೆಗೆ ಎಲ್ಪಿಜಿ ಗ್ಯಾಸ್ ಕೊರತೆ ಎದುರಾಗಿ, ಪ್ರಸಾದ ತಯಆರಿ ನಿಲ್ಲಿಸಬೇಕಾದ ಸನ್ನಿವೇಶ ನಿರ್ಮಾಣಗೊಂಡಿದೆ.
ಈ ದೇಗುಲದಲ್ಲಿ ಪ್ರತಿದಿನ 3 ಸಾವಿರದಿಂದ 4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಿದರೆ ಶುಕ್ರವಾರ ಹಾಗೂ ಮಂಗಳವಾರ 4 ರಿಂದ 5 ಸಾವಿರ ಮಂದಿಗೆ ಪ್ರಸಾದ ವಿತರಿಸಲಾಗುತ್ತಿದೆ. ಬೆಳಗ್ಗೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್ ಪ್ರಸಾದವಾಗಿ ನೀಡಿದರೆ ಮಧ್ಯಾಹ್ನ ಅನ್ನ ಸಾಂಬರ್ ನೀಡಲಾಗುತ್ತದೆ. ಸಂಜೆಯೂ ಪ್ರಸಾದದ ವ್ಯವಸ್ಥೆ ಇದೆ.
ಪ್ರತಿದಿನ ಭಕ್ತರಿಗೆ ಪ್ರಸಾದ ತಯಾರಿಸಬೇಕೆಂದರೆ ಒಂದರಿಂದ ಎರಡು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೇಕಾಗುತ್ತದೆ. ಸದ್ಯ 4 ಗ್ಯಾಸ್ ಸಿಲಿಂಡರ್ ಇದ್ದು, ಸಿಲಿಂಡರ್ ಸಿಗದೆ ಹೋದರೆ ಶುಕ್ರವಾರದಿಂದ ಪ್ರಸಾದ ನೀಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.


