ಐಪಿಎಲ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಭೂಮಿಕ್ ನನ್ನು ಆತ ಭೂಮಿಗೆ ಹೇಗೆ ಬಂದಿದ್ದನೋ ಹಾಗೇ ಕಳಿಸಿಬಿಟ್ಟೆ ಎಂದು ತಂದೆ ಲಕ್ಷ್ಮಣ್ ಹೇಳಿದ್ದಾರೆ.
ಹಾಸನದ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ಮಗ ಭೂಮಿಕ್ ಒಂದೇ ಒಂದು ದಿನ ದೇವರ ಪೂಜೆ ಮಾಡುತ್ತಿರಲಿಲ್ಲ. ದೇವರ ಪೂಜೆ ಮಾಡುವ ಬದಲು ತಂದೆ ತಾಯಿಗೆ ಮೂರು ಸುತ್ತು ಹಾಕುತ್ತಿದ್ದ. ನಮ್ಮನ್ನು ನಿಲ್ಲಿಸಿ ಕೈ ನಮಸ್ಕಾರ ಮಾಡಿಕೊಂಡು ಮೂರು ಸುತ್ತು ಪ್ರದರ್ಶನ ಹಾಕಿದ ನಂತರ ಅವನ ಎಂದಿನ ಕೆಲಸವನ್ನು ಪ್ರಾರಂಭಿಸುತ್ತಿದ್ದ. ಅದಕ್ಕೋಸ್ಕರನೇ ನಾನು ಅವನಿಗೆ ಶವ ಸಂಸ್ಕಾರದ ವೇಳೆ ಯಾವ ಪೂಜೆ ಸಲ್ಲಿಸದೆ, ಹಾರ ತುರಾಯಿ ತೊಡಿಸದೆ ಹೇಗೆ ಈ ಭೂಮಿಗೆ ಬಂದ ಅದೇ ರೀತಿ ನಾನು ಅವನನ್ನು ಕಳಿಸಿಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕುಪ್ಪಗೋಡು ಗ್ರಾಮ ಆಗಲಿ, ಅವನು ಬೆಳೆದಿದ್ದ ಬೆಂಗಳೂರು ಆಗಲಿ, ಯಾರನ್ನಾದರೂ ಅವನ ಬಗ್ಗೆ ಒಮ್ಮೆ ಕೇಳಿ ನೋಡಿ ಎಂದ ಅವರು, ನನ್ನ ನೋವು ಜಗತ್ತಿನಲ್ಲಿ ಯಾವ ತಂದೆಗೂ ಬಾರದಿರಲಿ ಎಂದು ಕಣ್ಣೀರು ಹಾಕಿದ್ದಾರೆ.