ಬೆಂಗಳೂರು: ಚೊಚ್ಚಲ ಪ್ರಶಸ್ತಿಗಾಗಿ ಹಾತೊರೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮಂಗಳವಾರ ನಡೆಯುವ ಹೈವೋಲ್ಟೇಜ್ ಐಪಿಎಲ್ ಟಿ-20 ಟೂರ್ನಿಯ ಫೈನಲ್ ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಸವಾಲುಗಳನ್ನು ಮೆಟ್ಟಿನಿಂತು ಫೈನಲ್ ಪ್ರವೇಶಿಸಿದ ಲೀಗ್ ನ ಅಗ್ರ ಎರಡು ತಂಡಗಳಲ್ಲಿ ಯಾರೇ ಗೆದ್ದರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿ ಪ್ರಶಸ್ತಿ ಎತ್ತಿ ಹಿಡಿದು ಹೊಸ ದಾಖಲೆ ಬರೆಯಲಿದ್ದಾರೆ.
ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಲ್ಲಿ ನಾಲ್ಕನೇ ಬಾರಿ ಮುಖಾಮುಖಿ ಆಗಲಿವೆ. ಮೊದಲ ಮುಖಾಮುಖಿಯಲ್ಲಿ ಪಂಜಾಬ್ ಗೆದ್ದರೆ ನಂತರ ನಡೆದ ಪ್ಲೇಆಫ್ ಸೇರಿದಂತೆ ಎರಡೂ ಬಾರಿಯೂ ಆರ್ ಸಿಬಿ ಜಯಭೇರಿ ಬಾರಿಸಿ ಫೈನಲ್ ಗೆ ಲಗ್ಗೆ ಹಾಕಿತ್ತು.
ಆರ್ ಸಿಬಿ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದು, 9 ವರ್ಷಗಳ ನಂತರ ಮತ್ತೆ ಫೈನಲ್ ಪ್ರವೇಶಿಸಿರುವ ಆರ್ ಸಿಬಿ ನಾಲ್ಕನೇ ಪ್ರಯತ್ನದಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಗುರಿ ಹೊಂದಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಎರಡನೇ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು, 11 ವರ್ಷಗಳ ನಂತರ ಫೈನಲ್ ಪ್ರವೇಶಿಸಿದ್ದು ಎರಡನೇ ಪ್ರಯತ್ನದಲ್ಲೇ ಪ್ರಶಸ್ತಿಗೆ ಮುತ್ತಿಡುವ ಗುರಿ ಹೊಂದಿದೆ.
ರಜತ್ ಪಟಿದಾರ್ ಐಪಿಎಲ್ ತಂಡವೊಂದರ ನಾಯಕ್ವ ವಹಿಸಿದ ಮೊದಲ ಬಾರಿಯೇ ತಂಡವನ್ನು ಫೈನಲ್ ಗೆ ಕರೆದೊಯ್ದ ಸಾಧನೆ ಮಾಡಿದ್ದರೆ, ಶ್ರೇಯಸ್ ಅಯ್ಯರ್ ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದರು. ಇದೀಗ ಪಂಜಾಬ್ ಗೆ ಪ್ರಶಸ್ತಿ ಗೆಲ್ಲಿಸಿಕೊಡುವ ಉಮೇದಿನಲ್ಲಿದ್ದಾರೆ.
ಭಾನುವಾರ ನಡೆದ ಕ್ವಾಲಿಫೈಯರ್ -2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್ ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್ ಮೂರು ಮತ್ತು ನಾಲ್ಕನೇ ಸ್ಥಾನಿಯಾಗಿ ಒಮ್ಮೆಯೂ ಫೈನಲ್ ಪ್ರವೇಶಿಸದ ತಮ್ಮ ದಾಖಲೆ ಮುಂದುವರಿಸಿದರೆ, ಕಳೆದ 18 ಪಂದ್ಯಗಳ ನಂತರ ಮೊದಲ ಬಾರಿ 200ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿ ಸೋಲುಂಡ ದಾಖಲೆ ಬರೆಯಿತು.
ಫೈನಲ್ ಪಂದ್ಯ ಗುಜರಾತ್ ನ ಅಹಮದಾಬಾದ್ ನಲ್ಲಿ ನಿಗದಿಯಾಗಿರುವುದಕ್ಕೆ ಭಾರೀ ಅಸಮಾಧಾನ ಉಂಟಾಗಿದೆ. ಕೋಲ್ಕತಾದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯ ಕೊನೆಯ ಗಳಿಗೆಯಲ್ಲಿ ಅಹಮದಾಬಾದ್ ಪಾಲಾಯಿತು.
ಆರ್ ಸಿಬಿ ಅಹಮದಾಬಾದ್ ನಲ್ಲಿ ಈ ಬಾರಿ ಒಂದೂ ಪಂದ್ಯ ಆಡದೇ ಇರುವ ಕಾರಣ ಆಟಗಾರರಿಗೆ ಇದು ಕಗ್ಗಂಟಾಗಿದೆ. ಪಂಜಾಬ್ ಕಿಂಗ್ಸ್ ಇಲ್ಲಿ ಒಂದು ಬಾರಿ ಆಡಿದ್ದರಿಂದ ಪಿಚ್ ಪರಿಚಯ ಹೊಂದಿದೆ. ಆದರೆ ಇದೇ ಪಿಚ್ ನಲ್ಲಿ ಆಡಿಸುತ್ತಾರೋ ಅಥವಾ ಬೇರೆ ಪಿಚ್ ನಲ್ಲಿ ಆಡಿಸುತ್ತಾರೋ ಎಂಬುದು ಕುತೂಹಲ ಉಂಟು ಮಾಡಿದೆ.