ಮೇ 3ರಿಂದ 10ರವರೆಗೆ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ತುಮಕೂರು ಮಹಿಳಾ ಓಪನ್ ಟೆನಿಸ್ ಚಾಂಪಿಯನ್ ಷಿಪ್ ತುಮಕೂರಿನಲ್ಲಿ ನಡೆಯಲಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ ತಿಳಿಸಿದ್ದಾರೆ.
ತುಮಕೂರು ಟೆನಿಸ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಅಂತಾರಾಷ್ಟ್ರೀಯ ಗುಣಮಟ್ಟದ ಟೆನಿಸ್ ಕ್ರೀಡಾಂಗಣಗಳನ್ನು ತುಮಕೂರಿನಲ್ಲಿ ನಿರ್ಮಿಸಿದ ಬಳಿಕ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದ ಕ್ರೀಡಾಕೂಟ ನಡೆಯುತ್ತಿದ್ದು, ತುಮಕೂರಿನ ಜನತೆ ಹಾಗೂ ಕ್ರೀಡಾಸಕ್ತರಿಗೆ ಇದೊಂದು ಸದಾವಕಾಶ ಎಂದರು.
ತುಮಕೂರು ಜಿಲ್ಲಾಡಳಿತ, ತುಮಕೂರು ಟೆನಿಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಸಹಕಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟ ನಡೆಯುತ್ತಿದ್ದು ವಿಶ್ವಾದ್ಯಂತ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಸುಮಾರು 12 ದೇಶಗಳಿಂದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಟೆನಿಸ್ ಕ್ರೀಡಾಕೂಟ ನಡೆಯಬೇಕಾದರೆ ಕನಿಷ್ಠ ನಾಲ್ಕು ಅಂಕಣಗಳು ಇರಬೇಕು. ತುಮಕೂರು ವಿವಿ ಅವರ ಸಹಕಾರದಲ್ಲಿ ವಿಶ್ವದರ್ಜೆಯ ಟೆನಿಸ್ ಅಂಕಣಗಳನ್ನು ನಿರ್ಮಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರೀಡಾಕೂಟವೊಂದನ್ನು ಇಲ್ಲಿ ನಡೆಸುವಂತೆ ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ಅವರನ್ನು ಕೋರಲಾಗಿತ್ತು. ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ಅವರು ತಮ್ಮ ಸಭೆಯಲ್ಲಿ ತೀರ್ಮಾನಿಸಿ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ರ್ಯಾಂಕಿಂಗ್ ನ ವಿಶ್ವ ಮಹಿಳಾ ಟೆನಿಸ್ ಕ್ರೀಡಾಕೂಟ ನಡೆಸಲು ಅವಕಾಶ ನೀಡಿದ್ದಾರೆ ಎಂದು ಸಚಿವರು ವಿವರಿಸಿದರು.
ತುಮಕೂರಿನ ಈ ಕ್ರೀಡಾಕೂಟವು ತುಮಕೂರು ಓಪನ್ ಚಾಂಪಿಯನ್ ಷಿಪ್ ಎಂದೇ ವಿಶ್ವ ಟೆನಿಸ್ ಭೂಪಟದಲ್ಲಿ ಕರೆಯಲ್ಪಡಲಿದೆ. ಇಲ್ಲಿ ಆಡುವ ಕ್ರೀಡಾಪಟುಗಳು ವಿಜೇತರಾದಲ್ಲಿ 35 ಪಾಯಿಂಟ್ ಗಳನ್ನು ಹಾಗೂ 30ಸಾವಿರ ಅಮೆರಿಕಾ ಡಾಲರ್ ಗಳನ್ನು ಗೆಲ್ಲಲಿದ್ದಾರೆ. ಅಲ್ಲದೆ ನಂತರದ ಸ್ಥಾನವನ್ನು ಹೊಂದುವ ಆಟಗಾರರು ಅಂತಾರಾಷ್ಟ್ರೀಯ ರ್ಯಾಂಕ್ ಗಳನ್ನು ಪಡೆಯಲಿದ್ದಾರೆ ಎಂದರು.
ಕರ್ನಾಟಕ ಹಾಗೂ ತುಮಕೂರಿನ ಟೆನಿಸ್ ಆಟಗಾರರಿಗೆ ವಿಶ್ವದರ್ಜೆಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಇದು ಸ್ಫೂರ್ತಿಯಾಗಲಿದೆ. ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಆದರೆ ಇನ್ನು ನಮ್ಮ ಕ್ರೀಡಾಪಟುಗಳ ಕಲಿಕೆಗೆ ಉತ್ತಮ ಅವಕಾಶಗಳು ಸಿಗಲಿವೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಮೇ ತಿಂಗಳಲ್ಲಿ ತುಮಕೂರು ಓಪನ್ ಟೆನಿಸ ಚಾಂಪಿಯನ್ ಷಿಪ್ ನಡೆಯಿತು. ಟೆನಿಸ್ ಫೆಡರೇಷನ್ ಈ ಭರವಸೆ ನೀಡಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಇನ್ನು ಮುಂದೆ ನಿರಂತರವಾಗಿ ನಡೆಯಲಿವೆ. ಅಂತಹ ವಾತಾವರಣವನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದ ಸಚಿವರು, ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಕೆಲಸ ಪ್ರಾರಂಭವಾಗಿದೆ. ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ ಹಾಗೂ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಲಾಗಿದೆ. ಅಲ್ಲದೆ ಇತ್ತೀಚೆಗೆ ತುಮಕೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಯವರು ಕ್ರೀಡಾ ಅಭಿವೃದ್ಧಿಗೆ ರೂ.6 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು ಅದರಂತೆ ಬಜೆಟ್ ನಲ್ಲಿ ರೂ. 3 ಕೋಟಿ ನೀಡಿದ್ದು, ಸುಮಾರು ರೂ.8 ಕೋಟಿ ಅನುದಾನವನ್ನು ನೀಡಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಕ್ರೀಡಾಕೂಟದ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಆಶ್ವಿಜ, ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಕರ್ನಾಟಕ ಲಾನ್ ಟೆನಿಸ್ ಅಸೋಸಿಯೇಷನ್ ನ ಅಮರ್ ಉಪಸ್ಥಿತರಿದ್ದರು.


