ಪಹಲ್ಗಾಂನಲ್ಲಿ ಉಗ್ರರ ದಾಳಿ, ಪಾಕ್ ವಿರುದ್ಧ ಭಾರತದಿಂದ ಆಪರೇಷನ್ ಸಿಂಧೂರು ಕಾರ್ಯಾಚರಣೆಯ ಬಳಿಕ ದೇಶದ ಗುಪ್ತಚರ ಸಂಸ್ಥೆ ಕಾರ್ಯಾಚಲನೆ ತೀವ್ರಗೊಳಿಸಿ ಹಲವು ಪಾಕ್ಪರ ಗೂಢಚಾರರನ್ನು ಈಗಾಗಲೇ ಬಂಧಿಸಿದೆ. ಇದೀಗ ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡುತ್ತಿದ್ದ ಗೂಢಚಾರನನ್ನು ರಾಜಸ್ಥಾನದ ಡಿಗ್ ಜಿಲ್ಲೆಯಲ್ಲಿ ದೆಹಲಿ ಪೊಲೀಸರ ವಿಶೇಷ ತಂಡ ಬಂಧಿಸಿದೆ.
ಹಸೀನ್ ಬಂಧಿತ ಆರೋಪಿ. ಆರೋಪಿಯು 15 ವರ್ಷಗಳ ಹಿಂದೆ ಸಂಬಂಧಿಕರನ್ನು ಭೇಟಿ ಮಾಡಲು ಹೋದವನು ಪಾಕ್ ಪರ ಗೂಢಚಾರಿಯಾಗಿದ್ದ ಎಂಬುದು ಗಮನಾರ್ಹ. ಹಸೀನ್ ನ ಸಹೋದರ ಕಾಸಿಮ್ ನನ್ನು ಈ ಹಿಂದೆ ಬಂಧಿಸಲಾಗಿತ್ತು ಮತ್ತು ವಿಚಾರಣೆ ವೇಳೆ ಆತ ಹಸೀನ್ ನ ಹೆಸರು ಬಾಯ್ಬಿಟ್ಟಿದ್ದಾನೆ.
ಹಸೀನ್ ಭಾರತದಿಂದ ಸಿಮ್ ಕಾರ್ಡ್ ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿ, ವಾಟ್ಸಾಪ್ ಖಾತೆ ತೆರೆಯಲು ಒಟಿಪಿ ನೀಡುತ್ತಿದ್ದ. ಈ ಸಿಮ್ ಕಾರ್ಡ್ ಬಳಸಿ ದೇಶದೊಳಗಿನ ಸಂವಹನ, ಸೂಕ್ಷ್ಮ ಸ್ಥಳಗಳ ಮಾಹಿತಿ ಮತ್ತು ಸೇನಾ ಪ್ರದೇಶಗಳ ಪೋಟೋಗಳನ್ನು ಪಾಕ್ ಏಜೆಂಟ್ ಗಳಿಗೆ ಕಳುಹಿಸುತ್ತಿದ್ದ. .ಹಸೀನ್ ಈ ಕೆಲಸಕ್ಕೆ ಹಣ ಪಡೆಯುತ್ತಿದ್ದ. ತನಗೆ ಮಾತ್ರವಲ್ಲದೆ ಕುಟುಂಬದ ಇತರರಿಗೂ ಪಾಕಿಸ್ತಾನದ ವೀಸಾ ಪಡೆಯಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಹಸೀನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಜಾಲದಲ್ಲಿ ಇನ್ನೂ ಯಾರೆಲ್ಲ ಇದ್ದಾರೆ, ಆರೋಪಿ ಪಾಕ್ಗೆ ಏನೆಲ್ಲ ಮಾಹಿತಿ ನೀಡಿದ್ದಾನೆ ಎಂಬ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ.