ಖ್ಯಾತ ಚಲನಚಿತ್ರ ನಿರ್ಮಾಪಕ ಸತ್ಯಜಿತ್ ರೇ ಅವರ ಪೂರ್ವಜರ ಮನೆಯನ್ನು ನೆಲಸಮ ಮಾಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿರುವ ಭಾರತ, ಈ ಐತಿಹಾಸಿಕ ಕಟ್ಟಡದ ಸಂರಕ್ಷಣೆಗೆ ನೆರವು ನೀಡಲು ಮುಂದಾಗಿದೆ.
ಬಾಂಗ್ಲಾದೇಶದ ಮೈಮೆನ್ಸಿಂಗ್ನಲ್ಲಿರುವ ಸತ್ಯಜಿತ್ ರೇ ಅವರ ಪೂರ್ವಜರ ಮನೆಯನ್ನು ಕೆಡವುವ ಕ್ರಮವು ವಿಷಾದಕರ ಸಂಗತಿ. ಅದನ್ನು ಎರಡೂ ದೇಶಗಳ ನಡುವಿನ ಸಂಸ್ಕೃತಿಯನ್ನು ಸಂಕೇತಿಸುವ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವಂತೆ ಭಾರತ ಒತ್ತಾಯಿಸಿದೆ. ಈ ಐತಿಹಾಸಿಕ ಕಟ್ಟಡವು ಸತ್ಯಜಿತ್ ರೇ ಅವರ ಅಜ್ಜ ಉಪೇಂದ್ರ ಕಿಶೋರ್ ರೇ ಚೌಧರಿಗೆ ಸೇರಿದ್ದಾಗಿದ್ದು, ಅವರು ಹೆಸರಾಂತ ಸಾಹಿತಿಯಾಗಿದ್ದರು.
ಬಾಂಗ್ಲಾದೇಶದ ಅಧಿಕಾರಿಗಳು ಕಟ್ಟಡವನ್ನು ಕೆಡವಲು ಸಿದ್ಧರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿ, ಮೈಮೆನ್ಸಿಂಗ್ನಲ್ಲಿರುವ ಸತ್ಯಜಿತ್ ರೇ ಅವರ ಅಜ್ಜ ಉಪೇಂದ್ರ ಕಿಶೋರ್ ರೇ ಚೌಧರಿಗೆ ಸೇರಿದ ಪೂರ್ವಜರ ಆಸ್ತಿಯನ್ನು ಕೆಡವಲಾಗುತ್ತಿರುವ ವಿಚಾರ ವಿಷಾದಕರ ಎಂದು ಹೇಳಿದೆ.
ಸತ್ಯಜಿತ್ ರೇ ಪೂರ್ವಜರ ಮನೆಯನ್ನು ಕೆಡವುವ ಬಗ್ಗೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದು ಅತ್ಯಂತ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದ್ದರು. ಕಟ್ಟಡವು ಬಂಗಾಳದ ಸಾಂಸ್ಕೃತಿಕ ಇತಿಹಾಸದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದ್ದರು.
ಈ ಪಾರಂಪರಿಕ ಕಟ್ಟಡದ ಸಂರಕ್ಷಣೆಗ ಕ್ರಮ ವಹಿಸುವಂತೆ ಬಾಂಗ್ಲಾದೇಶ ಸರ್ಕಾರ ಮತ್ತು ಅಲ್ಲಿನ ಜನರಿಗೆ ಮನವಿ ಮಾಡುತ್ತೇನೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದರು.