ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಾಡ್ಲಾಪುರ್ ಗ್ರಾಮದ ಬಳಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಯ ಗುರುತಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ಪೊಲೀಸರು ಕೊಲೆಗಾರ ಯಾರು, ಏಕೆ ಕೊಲೆ ಮಾಡಿದ್ದಾನೆಂದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳಿಂದ ಯಾವ ವ್ಯಕ್ತಿಯ ಜೊತೆ ಮಹಿಳೆ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ನಲ್ಲಿದ್ದರೋ ಆತನೇ ಆಕೆಯನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದ ಎಂಬ ವಿಷಯ ಬಯಲಾಗಿದೆ.
ಆಕೆಯ ಶವದ ಪಕ್ಕದಲ್ಲಿ ಶವಸಂಸ್ಕಾರಕ್ಕಾಗಿ ತಂದ ಒಂದು ಸಲಾಕೆ ಪತ್ತೆಯಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ಅದು ಯಾವ ಅಂಗಡಿಯಿಂದ ಖರೀದಿ ಆಗಿದೆ ಎಂಬುದನ್ನು ಪತ್ತೆ ಹಚ್ಚಿದ್ದರು. ಅಂಗಡಿ ಮಾಲೀಕ ನೀಡಿದ ಮಾಹಿತಿ ಮೇರೆಗೆ ವಾಡಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ವಿಷಯ ಬೆಳಕಿಗೆ ಬಂದಿದೆ. ಕೊಲೆಯಾದ ಮಹಿಳೆ ದೇವಿಬಾಯಿ, ಆಕೆಯ ಜೊತೆ ಅಕ್ರಮ ಸಂಬಂಧ ಹೊಂದಿದ ಸೋಮುಲು ಕೊಲೆ ಮಾಡಿದಾತ.
ಸೋಮುಲು ಹಾಗೂ ದೇವಿಬಾಯಿ ವಿಜಯಪುರದ ಸಿಂದಗಿ ತಾಲೂಕಿನವರಾಗಿದ್ದು, ದೇವಿಬಾಯಿಯ ಗಂಡ ಮೃಪಟ್ಟಿದ್ದು, ಆಕೆಯ ಜೊತೆ ಸೋಮುಲು ಸಂಬಂಧವಿಟ್ಟುಕೊಂಡಿದ್ದ, ಆಕೆಯ ಮೊದಲ ಮಗಳಿಗೆ ಸೋಮುಲು ಆರ್ಥಿಕ ಸಹಾಯ ಮಾಡಿ ಮದುವೆ ಮಾಡಿಸಿದ್ದ, ಎರಡನೇ ಮಗಳ ಮದುವೆಯನ್ನು ತನ್ನ ಸಂಬಂಧಿಕರೊಂದಿಗೆ ಮಾಡುವಂತೆ ಸೋಮುಲು ದೇವಿಬಾಯಿ ಜೊತೆ ಜಗಳ ತೆಗೆಯುತ್ತಿದ್ದ, ಇದೇ ವಿಚಾರಕ್ಕೆ ಮೇ 30ರಂದು ಇಬ್ಬರ ನಡುವೆ ಜಗಳ ನಡೆದಾಗ ದೇವಿಬಾಯಿ ಕೊಲೆಗೆ ಸೋಮುಲು ಪ್ಲ್ಯಾನ್ ಮಾಡಿದ್ದ. ತವರು ಮನೆಗೆ ಬಿಡುವು ಆಕೆಯನ್ನು ನಂಬಿಸಿ ಕಾರಿನಲ್ಲಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಚಿತ್ತಾಪುರ ತಾಲೂಕಿಗೆ ಬಂದು ಸಲಾಕೆ , ಪೆಟ್ರೋಲ್ ಖರೀದಿಸಿದ್ದ. ಲಾಡ್ಲಾಪುರ ಗ್ರಾಮದ ಬಳಿ ಶವ ಹೂಳಲು ಯತ್ನಿಸಿ ಭೂಮಿ ಗಟ್ಟಿಯಾಗಿದ್ದ ಕಾರಣ ಪೆಟ್ರೋಲ್ ನಿಂದ ಶವ ಸುಟ್ಟು ಪರಾರಿಯಾಗಿದ್ದ.