ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಗಂಗಾವತಿ ಬಿಜೆಪಿ ಶಾಸಕರಾಗಿದ್ದ ಗಾಲಿ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅನಂತಪುರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ್ ರೆಡ್ಡಿ ಸೇರಿದಂತೆ ನಾಲ್ವರಿಗೆ ಹೈದರಾಬಾದ್ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 16 ವರ್ಷಗಳ ಹಿಂದೆ ಈ ಪ್ರಕರಣವನ್ನು ಸಿಬಿಐ ದಾಖಲಿಸಿತ್ತು. ಆಂಧ್ರಪ್ರದೇಶ ಗೃಹ ಸಚಿವೆಯಾಗಿದ್ದ ಸಬಿತಾ ಇಂದ್ರಾ ರೆಡ್ಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ ಕೃಪಾನಂದಂ ವಿರುದ್ಧದ ಆರೋಪಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು.
ಓಬುಲಾಪುರಂ ಗಣಿಗಾರಿಕೆ ಕಂಪನಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಜನಾರ್ಧನ ರೆಡ್ಡಿಯವರನ್ನು ಸಿಬಿಐ ಕೋರ್ಟ್ ಮೇ 6 ರಂದು ಹಲವು ವರ್ಷಗಳ ತನಿಖೆಯ ನಂತರ ದೋಷಿಯೆಂದು ಘೋಷಿಸಿತ್ತು.
2008-2011ರಲ್ಲಿ ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ವಿರುದ್ಧ ಬಳ್ಳಾರಿಯ ಒಬುಲಾಪುರಂ ಗಣಿಗಾರಿಕೆ ಕಂಪನಿಯ ಮೂಲಕ ಕಾನೂನುಬಾಹಿರವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿದ ಆರೋಪವಿತ್ತು. ಲೋಕಾಯುಕ್ತ ಈ ಅಕ್ರಮವನ್ನು ತಡೆಯಲು ಕಾರ್ಯಾಚರಣೆ ನಡೆಸಿತ್ತು.
ಕರ್ನಾಟಕ– ಆಂಧ್ರಪ್ರದೇಶ ಅಂತರರಾಜ್ಯ ಗಡಿ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ 884 ಕೋಟಿ ರೂ. ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿತ್ತು. ಆರೋಪಿಗಳ ವಿರುದ್ಧ ಸಿಬಿಐ 2009ರ ಡಿಸೆಂಬರ್ 8ರಂದು ಪ್ರಕರಣ ದಾಖಲಿಸಿತ್ತು. ಮೊದಲ ಆರೋಪಪಟ್ಟಿಯನ್ನು 2011ರ ಡಿಸೆಂಬರ್ 3ರಂದು ಸಲ್ಲಿಸಿತ್ತು. ನಂತರ ಗಣಿ ಕಂಪನಿಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ, ರಾಜಗೋಪಾಲ್, ದಿವಂಗತ ಆರ್. ಲಿಂಗಾ ರೆಡ್ಡಿ ಮತ್ತು ಒಎಂಸಿ ವಿರುದ್ಧದ ಪ್ರಕರಣದಲ್ಲಿ ಮೂರು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಿತ್ತು.