ವೈದ್ಯರ ಶಿಫಾರಸು ಇಲ್ಲದ, ಪರವಾನಗಿ ಇಲ್ಲದೇ ದಾವಣಗೆರೆಯಲ್ಲಿ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಾದಕ ದ್ರವ್ಯ ನಿಗ್ರಹ ಪಡೆ 5 ಮಂದಿಯನ್ನು ಬಂಧಿಸಿದೆ.
ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿರುವ ಎಸ್ಪಿಎಸ್ ನಗರದ ಅಂಗಡಿ ಮಾಲೀಕ ಮೆಹಬೂಬ್ ನಗರದ ಅಜಿಮುದ್ದೀನ್ (37), ಅಂಗಡಿ ಕೆಲಸಗಾರ ಶಿವಕುಮಾರ (38), ದೇವರಾಜ ಅರಸ್ ಬಡಾವಣೆಯ ಎ ಬ್ಲಾಕ್ ನ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಮಹಮದ್ ಶಾರೀಕ್ (35), ಚನ್ನಗಿರಿ ತಾಲೂಕಿನ ಹೊನ್ನೆಬಾಗಿಯ ಅಡಿಕೆ ವ್ಯಾಪಾರ ಮಂಡಲ ಹತ್ತಿರದ ಸೈಯದ್ ಬಾಬು ಅಲಿಯಾಸ್ ಯೂನೂಸ್, ಚನ್ನಗಿರಿಯ ಸೈದಾಮೊಹಲ್ಲಾದ ಆಟೋ ಚಾಲಕ ಅಬ್ದುಲ್ ಗಫರ್ ಅಲಿಯಾಸ್ ಆಟೋಬಾಬು (48) ಬಂಧಿತರು.
ಬಂಧಿತರಿಂದ 100 ಎಂ.ಎಲ್ನ ಒಟ್ಟು 340 Broncof-C cough Syrup ಬಾಟಲ್ಗಳು, 100 ಎಂ.ಎಲ್ನ 15 EDEX-CT cough Syrup ಬಾಟಲ್ಗಳು, 20 ಸಣ್ಣ ಬಾಕ್ಸ್ಗಳಲ್ಲಿರುವ aceclofenac Paracetamol & serratiopeptidase tablets, ಒಂದು ಹೊಂಡಾ ಆಕ್ಟಿವಾ ಬೈಕ್, 1,200 ರೂ., ನಗದು ಸೇರಿ ಒಟ್ಟು 1,25,504 ರೂ. ಮೌಲ್ಯದ ಔಷಧಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾದಕ ದ್ರವ್ಯ ನಿಗ್ರಹ ಪಡೆಯ ವಿಶೇಷ ಕರ್ತವ್ಯ ಅಧಿಕಾರಿ ಪಿ.ಎಸ್.ಐ. ಸಾಗರ್ ಅತ್ತರವಾಲ್ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
“ಐವರನ್ನು ಬಂಧಿಸಿ ಸಿರಪ್, ಟ್ಯಾಬ್ಲೆಟ್ಗಳನ್ನು ವಶಕ್ಕೆ ಪಡೆದಿದ್ದೇವೆ. ಈ ಕಾಫ್ ಸಿರಪ್ಗಳನ್ನು ಮಾದಕ ದ್ರವ್ಯದಂತೆ ಸೇವನೆ ಮಾಡುತ್ತಿದ್ದರು. ಮೆಡಿಕಲ್ ಲೈಸೆನ್ಸ್ ಮಾಡಿಕೊಂಡು ಪಶ್ಚಿಮ ಬಂಗಾಳ ರಾಜ್ಯದಿಂದ ತರಿಸುತ್ತಿದ್ದರು. ಕೂಲಿ ಕೆಲಸ ಮಾಡುವವರಿಗೆ, ದಿನಗೂಲಿ ನೌಕರರಿಗೆ ಮಾರಾಟ ಮಾಡುತ್ತಿದ್ದರು. ಒಂದು ಬಾಟಲಿಗೆ 60-70 ರೂ. ದರ ಇದ್ದು, ಅದನ್ನು 400-500ರೂ. ತನಕ ಮಾರಾಟ ಮಾಡುತ್ತಿದ್ದರು. ಪೂರ್ತಿ ಒಂದು ಬಾಟಲ್ ಕುಡಿಯುವುದರಿಂದ ಮತ್ತು ಬರುತ್ತಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ” ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.