Wednesday, October 29, 2025
Menu

ಹಣೆಯಲ್ಲಿ ಬರೆದಿದ್ದರೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ: ಡಿಕೆ ಸುರೇಶ್

“ನಮ್ಮ ಸಹೋದರ ಡಿಕೆಶಿವಕುಮಾರ್ ಅವರ ಹಣೆಯಲ್ಲಿ ಬರೆದಿದ್ದರೆ ಸಿಎಂ ಆಗುತ್ತಾರೆ, ಇಲ್ಲದಿದ್ದರೆ ಇಲ್ಲ. ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು” ಎಂದು ಬಮೂಲ್ ಅಧ್ಯಕ್ಷ, ನಿಕಟಪೂರ್ವ ಸಂಸದ ಡಿಕೆ ಸುರೇಶ್  ಹೇಳಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಸಹೋದರನ ರಾಜಕೀಯ ಭವಿಷ್ಯ ಬದಲಾಗಲಿದೆ ಹಾಗೂ ಅಣ್ಣನನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡುವ ಆಸೆಯಿದೆ ಎನ್ನುವ ಹಿಂದಿನ ಹೇಳಿಕೆ ಬಗ್ಗೆ ಕೇಳಿದಾಗ, “ಆಸೆಯಿದೆ ಎಂದು ಹೇಳಿದ್ದೆ. ಅವರ ಹಣೆಯಲ್ಲಿ ‌ಬರೆದಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಇಲ್ಲ. ಪಕ್ಷ ಹೇಳಿದಂತೆ ಅವರು ನಡೆದುಕೊಳ್ಳುತ್ತಾರೆ. ಪಕ್ಷದ ಅಧ್ಯಕ್ಷರಾಗಿ, ಡಿಸಿಎಂ ಆಗಿ ಪಕ್ಷದ ಏಳಿಗೆಗೆ, ಘನತೆಗೆ ಚ್ಯುತಿ ಬರದಂತೆ  ನಡೆದುಕೊಳ್ಳುತ್ತಿದ್ದಾರೆ” ಎಂದರು.

ಪಕ್ಷನಿಷ್ಠರಾಗಿ ಡಿಕೆ ಶಿವಕುಮಾರ್ ನಡೆದುಕೊಳ್ಳುತ್ತಿದ್ದಾರೆ. ಅವರು ನವೆಂಬರ್ ಕ್ರಾಂತಿ ವಿಚಾರದ ಬಗ್ಗೆ ಅವರು ಗಮನ ಹರಿಸುತ್ತಿಲ್ಲವಲ್ಲ ಎಂದು ಕೇಳಿದಾಗ, “ಪಕ್ಷದ ಅಧ್ಯಕ್ಷರಾಗಿ ಎಲ್ಲರನ್ನೂ ಸಮಾನವಾಗಿ ನೋಡಬೇಕಿರುವುದು ಅವರ ಕರ್ತವ್ಯ” ಎಂದು ಹೇಳಿದರು.

ನವೆಂಬರ್ 15 ರ ನಂತರ ಏನಾದರೂ ಬದಲಾವಣೆ ಆಗುತ್ತದೆಯೇ ಎಂದು ಕೇಳಿದಾಗ, “ನನಗೆ ನವೆಂಬರ್ ಎಂದರೆ ಕನ್ನಡ ರಾಜ್ಯೋತ್ಸವ ನೆನಪಾಗುತ್ತದೆ. ನಾವು, ನೀವೆಲ್ಲರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡೋಣ. ಮಿಕ್ಕ ವಿಚಾರಗಳ ಬಗ್ಗೆ ನನಗೆ ತಿಳಿದಿಲ್ಲ. ಈ ಪ್ರಶ್ನೆಯನ್ನು ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಯವರು, ಎಐಸಿಸಿ ನಾಯಕರಿಗೆ ಕೇಳಬೇಕು”ಎಂದರು.

2028 ರ ಚುನಾವಣೆಗೂ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಬಗ್ಗೆ ಕೇಳಿದಾಗ, “ರಾಜಕೀಯದಲ್ಲಿ 95-98 ವರ್ಷ ಆದವರೂ ಇದ್ದಾರೆ. ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತೇನೆ ಎನ್ನುವುದರಲ್ಲಿ ಯಾವ ತಪ್ಪೂ ಇಲ್ಲ.‌ ಅವರು ನಮ್ಮ ನಾಯಕರು. ಮುಂದಿನ ಚುನಾವಣೆಯನ್ನು ಅವರ ನೇತೃತ್ವದಲ್ಲಿ ಎದುರಿಸುತ್ತೇವೆ” ಎಂದು ಉತ್ತರಿಸಿದರು.

ಸಿದ್ದರಾಮಯ್ಯ ಅವರು ಅನಿವಾರ್ಯವೇ ಎಂದು ಕೇಳಿದಾಗ, “ಒಬ್ಬ ನಾಯಕನಿಗೆ ಇರಬೇಕಾದ ಎಲ್ಲಾ ಅವಕಾಶಗಳು ಅವರಿಗಿದೆ. ಎಲ್ಲರಿಗಿಂತ ಗಟ್ಟಿಯಾಗಿ, ಚೆನ್ನಾಗಿ ಓಡಾಡುತ್ತಿದ್ದಾರೆ. ದಿನನಿತ್ಯ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಉತ್ತಮವಾಗಿ ಆಡಳಿತ ನಡೆಯುತ್ತಿದೆ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸುವುದರಲ್ಲಿ ತಪ್ಪೇನಿಲ್ಲ” ಎಂದರು.

ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಎನ್ನುವ ವಿಚಾರದ ಬಗ್ಗೆ ಕೇಳಿದಾಗ, “ನನಗೆ ಇದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಇದು ಎರಡೂವರೆ ವರ್ಷದ ವಿಚಾರವಲ್ಲ. ಐದು ವರ್ಷಗಳ ಕಾಲ ಕೆಲಸ ಮಾಡಿ ಎಂದು ಜನ ಆಶೀರ್ವಾದ ಮಾಡಿದ್ದಾರೆ. 140 ಸ್ಥಾನಗಳನ್ನು ಕೊಟ್ಟಿದ್ದಾರೆ. ನಾವು ಜನರ ಹಿತವನ್ನು ಕಾಯಬೇಕು. ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಕೆಲಸ‌ ಮಾಡುತ್ತಿವೆ” ಎಂದು ಹೇಳಿದರು.

ನಾಯಕತ್ವ ಬದಲಾವಣೆಯ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರುತ್ತಿಲ್ಲವೇ ಎಂದು ಕೇಳಿದಾಗ, “ನನಗೆ ಆಡಳಿತ ನಡೆಸಿ ಅನುಭವವಿಲ್ಲ. ಸಂಸದನಾಗಿ ಇರುವುದೇ ಬೇರೆ. ಆಡಳಿತ ನಡೆಸುವುದೇ ಬೇರೆ” ಎಂದು ಪ್ರತಿಕ್ರಿಯೆ ನೀಡಿದರು. ಸರ್ಕಾರದ ಆಡಳಿತ ನೋಡಿ ಕಾರ್ಯಕರ್ತರು ತೃಪ್ತರಾಗಿದ್ದಾರೆಯೇ ಎಂದು ಕೇಳಿದಾಗ, “ಎಲ್ಲರನ್ನೂ ತೃಪ್ತಿಪಡಿಸಲು ಆಗುವುದಿಲ್ಲ. ಯಾವುದೇ ಸರ್ಕಾರ ಇದ್ದರೂ ನಾಯಕರು ಕಾರ್ಯಕರ್ತರ ಅಭಿಪ್ರಾಯ ಬೇರೆ, ಬೇರೆ ಇದ್ದೇ ಇರುತ್ತದೆ. ಇದನ್ನು ಸರಿದೂಗಿಸುವ ಕೆಲಸವನ್ನು ಪಕ್ಷ ಹಾಗೂ ನಾಯಕತ್ವ ಮಾಡುತ್ತದೆ” ಎಂದರು.

ಶ್ರಮಕ್ಕೆ ತಕ್ಕ ಪ್ರತಿಫಲ ಡಿಕೆ ಶಿವಕುಮಾರ್ ಅವರಿಗೆ ದೊರೆಯಲಿದೆಯೇ ಎಂದು ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಶಾಸಕರು ಕೇಳುವುದರಲ್ಲಿ ತಪ್ಪೇನಿಲ್ಲ” ಎಂದರು. ಮೈಗೆ ಎಣ್ಣೆ ಸವರಿಕೊಂಡು ಉತ್ತರ ನೀಡಲು ಕುಳಿತಿದ್ದೀರಾ ಎಂದಾಗ, “ನಾನು ಎಂದಿಗೂ ಮೈಗೆ ಎಣ್ಣೆ ಹಚ್ಚಿಕೊಳ್ಳುವವನಲ್ಲ. ಒಳಗೆ ಹಾಕಿಕೊಳ್ಳುವವನಲ್ಲ. ನನಗೆ ಎರಡೂ ಅಭ್ಯಾಸ ಇಲ್ಲ” ಎಂದರು.

ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು ಎನ್ನುವ ಕೂಗಿನ ಬಗ್ಗೆ ಕೇಳಿದಾಗ, “ಎಲ್ಲರ ಸಲಹೆಗಳನ್ನು ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿಗಳು ಗಮನಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ. ಇದರಲ್ಲಿ ನನ್ನ ಪಾತ್ರ ಹಾಗೂ ಹೇಳಿಕೆ ಅಪ್ರಸ್ತುತ” ಎಂದು ಉತ್ತರಿಸಿದರು.

ಡಿಕೆಶಿವಕುಮಾರ್ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ ಎನ್ನುವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹಿರಿಯ ನಾಯಕರಾದ ಅವರು ಸಲಹೆಗಳನ್ನು ನೀಡುತ್ತಿದ್ದಾರೆ. ತಮ್ಮ ಸಲಹೆಗಳನ್ನು ಪಕ್ಷದ ವರಿಷ್ಠರಿಗೆ ತಿಳಿಸುತ್ತಿದ್ದಾರೆ” ಎಂದರು.

ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಅನುಮತಿ ವಿಚಾರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಬಗ್ಗೆ ಕೇಳಿದಾಗ, “ಆರ್‌ ಎಸ್ ಎಸ್ ಪಥಸಂಚಲ‌ನಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ದೊಣ್ಣೆ ಹಿಡಿದುಕೊಂಡು ಮಾಡುವ ಪಥ ಸಂಚಲನಕ್ಕೆ ವಿರೋಧವಿದೆ. ದೊಣ್ಣೆ ಹಿಡಿದುಕೊಂಡು ಮಾಡುವ ಪಥಸಂಚಲನ ಹಿಂದಿನ ಕಾಲದಲ್ಲಿ ಸರಿ ಎನಿಸುತ್ತಿತ್ತು. ಬೇರೆಯವರು ಇದೇ ಸಂದರ್ಭದಲ್ಲಿ ಲಾಠಿ ಹಿಡಿದು ಓಡಾಡುವುದಕ್ಕೆ ಅವಕಾಶ ನೀಡುತ್ತೀರಾ ಎನ್ನುವುದು ಇಲ್ಲಿನ ಪ್ರಶ್ನೆ” ಎಂದರು.

“ಇವರು ದೊಣ್ಣೆ ಹಿಡಿದು ಓಡಾಡುತ್ತಾರೆ. ಬೇರೆ ಸಮುದಾಯ, ಸಂಘಟನೆಗಳು ಇದೇ ಕೆಲಸ ಮಾಡಿದರೆ ಆಗ ಏನಾಗುತ್ತದೆ ಎನ್ನುವುದನ್ನು ಚಿಂತನೆ ಮಾಡಬೇಕಾದ ಕಾಲವಿದು. ಅದರ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಈ ಮೊದಲು ಆರ್ ಎಸ್ ಎಸ್ ನವರು ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಧರಿಸುತ್ತಿದ್ದಾರೆ. ಅಂದರೆ ಬದಲಾವಣೆಗಳನ್ನು ಅವರೂ ಸಹ ಮಾಡಿಕೊಳ್ಳಬೇಕು. ನಾನು ಅವರಿಗೆ ಹೇಳುವಷ್ಟು ದೊಡ್ಡವನಲ್ಲ. ಅವರೇ ಇದರ ಬಗ್ಗೆ ಅರಿತುಕೊಂಡರೆ ಒಳ್ಳೆಯದು” ಎಂದು ಹೇಳಿದರು.

ದಲಿತ ಸಿಎಂ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಬಗ್ಗೆ ಕೇಳಿದಾಗ, “ತಪ್ಪೇನೂ ಇಲ್ಲ. ಸಮಾವೇಶ ಮಾಡುವುದು ತಪ್ಪಲ್ಲ. ಪಕ್ಷದ ಸಂಘಟನೆಗೆ ಇದು ಶಕ್ತಿ” ಎಂದರು. ಪಕ್ಷದ ಅಡಿಯಲ್ಲಿಯೇ ಕಾರ್ಯಕ್ರಮ ಮಾಡುತ್ತಾರೆಯೇ ಎಂದು ಕೇಳಿದಾಗ, “ಅದು ಅವರವರಿಗೆ ಸಂಬಂಧಪಟ್ಟಿದ್ದು. ಯಾವ ವಿಚಾರವಾಗಿ ಮಾಡುತ್ತಿದ್ದಾರೆ, ಯಾರು ಮಾಡುತ್ತಿದ್ದಾರೋ ಅವರಿಗೆ ಬಿಟ್ಟಿದ್ದು” ಎಂದು ತಿಳಿಸಿದರು.

“ಗಾಂಧಿ ಭಾರತ ಕಾರ್ಯಕ್ರಮ ನಡೆಯುವ ವೇಳೆಯಲ್ಲಿಯೇ ನೂರು ಕಾಂಗ್ರೆಸ್ ಕಚೇರಿಗಳನ್ನು ಕಟ್ಟಬೇಕು ಎಂದು ತೀರ್ಮಾನ ಮಾಡಲಾಗಿತ್ತು. ಎಲ್ಲೆಲ್ಲಿ ನಿವೇಶನಗಳಿವೆಯೋ ಅಲ್ಲೆಲ್ಲಾ ಕಚೇರಿ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಕ್ಷದ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ನೀಡುತ್ತಾರೆ” ಎಂದರು.

Related Posts

Leave a Reply

Your email address will not be published. Required fields are marked *