ಗದ್ದೆಗಳ ಬದುಗಳಲ್ಲಿ ಸಹಜವಾಗಿಯೇ ಬೆಳೆಯುವ ಅಥವಾ ನೆಟ್ಟು ಬೆಳೆಸಬಹುದಾದ ಬ್ರಾಹ್ಮಿ ಅಥವಾ ಒಂದೆಲಗ ಆರೋಗ್ಯದ ಆಗರವಾಗಿ ಗುರುತಿಸಿಕೊಂಡಿದೆ.
ಇದರ ಎರಡು ಎಲೆ ಮತ್ತು ಎರಡು ಕಾಳುಮೆಣಸನ್ನು ಪ್ರತಿದಿನ ಬೆಳಗ್ಗೆ ಜಗಿದು ನುಂಗುವುದು ಸ್ಮರಣಶಕ್ತಿ ವೃದ್ಧಿಗೆ ಬಹಳ ಸಹಕಾರಿ, ಆದರೆ ಇದು ಕಹಿಮಿಶ್ರಿತ ಒಗರು ಹಾಗೂ ಖಾರದ ಅನುಭವ ನೀಡುವುದರಿಂದ ಮಕ್ಕಳು ಸೇವಿಸುವಂತೆ ಮಾಡುವುದು ಕಷ್ಟದ ಕೆಲಸ.
ಹೀಗಾಗಿ ಒಂದೆಲಗವನ್ನು ಚಟ್ನಿಯ ರೂಪದಲ್ಲಿ ಸೇವಿಸುವುದು ಉತ್ತಮ, ಸಾಧ್ಯವಾದರೆ ತಿಂಗಳಿಗೊಮ್ಮೆಯಾದರೂ ಬೇರು ಸಹಿತ ಗಿಡವನ್ನು ಕಿತ್ತು ತೊಳೆದು ಕೊಂಡು ಚಟ್ನಿ ಮಾಡಿ ಅನ್ನ, ಚಪಾರಿ, ದೋಸೆ ಜೊತೆ ತಿನ್ನಬಹುದಾಗಿದೆ. ಮಜ್ಜಿಗೆ ಸೇರಿಸಿ ತಂಬುಳಿ ಮಾಡಿಯೂ ಸೇವಿಸಬಹುದು. ಇದು ಸ್ಮರಣ ಶಕ್ತಿ ಹೆಚ್ಚಿಸುವ ಜೊತೆ ಮನಸ್ಸಿಗೆ ಪ್ರಶಾಂತತೆ ಉಂಟು ಮಾಡುತ್ತದೆ, ಹೀಗಾಗಿ ಏಕಾಗ್ರತೆ ವೃದ್ಧಿಸುತ್ತದೆ. ಇದು ತಂಪು ಗುಣ ಹೊಂದಿರುವುದರಿಂದ ಎಣ್ಣೆಯಲ್ಲಿ ಈ ಎಲೆ ಬಳಕೆಯಿಂದ ತಲೆಗೂದಲು ದಟ್ಟವಾಗಿ ಬೆಳೆಯುವುದು.
ನರರೋಗ ಮತ್ತು ಮಾನಸಿಕ ಆಯಾಸದ ಚಿಕಿತ್ಸೆಗಾಗಿ ಔಷಧಿಗಳಲ್ಲಿ ಒಂದೆಲಗವನ್ನು ಬಳಸಲಾಗುತ್ತದೆ. ಮಕ್ಕಳಲ್ಲಿ ಐಕ್ಯೂ ಮಟ್ಟ, ಸ್ಮರಣ ಶಕ್ತಿ, ಮತ್ತು ಮಾನಸಿಕ ಏಕಾಗ್ರತೆ, ಪ್ರಶಾಂತ ಮನಸ್ಥಿತಿ ವೃದ್ಧಿಗೆ ಒಂದೆಲಗ ಅದ್ಭುತ ಎಂದೇ ಹೇಳಲಾಗುತ್ತದೆ. ಅಪಸ್ಮಾರ, ನಿದ್ರಾಹೀನತೆ, ಅಸ್ತಮಾ ಮತ್ತು ಸಂಧಿವಾತದ ಚಿಕಿತ್ಸೆಯಲ್ಲೂ ಇದರ ಬಳಕೆಯಿದೆ. ಕೂದಲು ಉದುರುವಿಕೆ ತಡೆಯಲು ಒಂದೆಲಗದ ಎಣ್ಣೆಯನ್ನು ಬಳಸುವುದು ಸಾಮಾನ್ಯ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರುವುದಾಗಿ ಸಂಶೋಧನೆಗಳು ಉಲ್ಲೇಖಿಸಿವೆ. ಚರ್ಮದ ಸಮಸ್ಯೆಗಳಿಗೆ ಈ ಸಸ್ಯ ಬಳಸಿ ತಯಾರಿಸುವ ಔಷಧಿ ರಾಮಬಾಣ.
ಕೆಲವೊಬ್ಬರಿಗೆ ಅಲರ್ಜಿಯಾಗಿ ಶೀತವನ್ನು ಪ್ರಕೋಪಗೊಳಿಸಬಹುದು ಅಥವಾ ದೇಹ ಥಂಡಿಯಾಗಿ ಶೀತಕ್ಕೆ ಕಾರಣವಾಗಬಹುದು. ಅಂಥವರು ಆಯುರ್ವೇದ ತಜ್ಞರ ಸಲಹೆ ಪಡೆದು ಬಳಸುವುದು ಉತ್ತಮ.