ವಿಜಯಪುರ : ಗಗನ್ ಮಹಲ್ ಉದ್ಯಾನವನದಲ್ಲಿ ರೈತರು ಹಾಗೂ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸಚಿವ ಡಾ.ಎಂ.ಬಿ. ಪಾಟೀಲ ಭೇಟಿ ನೀಡಿದರು
ಕಬ್ಬು ಬೆಳೆಗಾರರ ಸಮಗ್ರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ಸೂಕ್ತವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು, ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಕ್ಕರೆ ಸಚಿವರು ಸೇರಿದಂತೆ ಅನೇಕ ಸಚಿವರ ಸಮಕ್ಷಮದಲ್ಲಿ ಈ ವಿಷಯವಾಗಿ ವಿಶೇಷ ಸಭೆ ನಡೆಸಲಾಗುವುದು, ಪ್ರಧಾನಮಂತ್ರಿಗಳನ್ನು ಸಹ ಭೇಟಿ ಮಾಡುವ ನಿಟ್ಟಿನಲ್ಲಿಯೂ ಸಚಿವ ಸಂಪುಟದಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ನಾವು ಬದ್ಧ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಭರವಸೆ ನೀಡಿದರು.
ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡುವ ಪ್ರತಿ ಟನ್ ಕಬ್ಬಿಗೆ ಕನಿಷ್ಠ ೩೫೦೦ ರೂ. ದರ ನಿಗದಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ, ವಿವಿಧ ರೈತಪರ, ಕನ್ನಡಪರ ಸಂಘಟನೆಗಳು ಜಂಟಿಯಾಗಿ ಗಗನ್ ಮಹಲ್ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದ ಅವರು, ಕಳೆದ ೯ ವರ್ಷಗಳಿಂದ ಸಕ್ಕರೆ ಬೆಲೆ ಪರಿಷ್ಕರಣೆ ಮಾಡಿದಿರುವುದು, ಎಥೆನಾಲ್ ಖರೀದಿಸುವಲ್ಲಿ ಕೇಂದ್ರ ಸರ್ಕಾರದ ನಿರಾಸಕ್ತಿ ತೋರುತ್ತಿದೆ, ಈ ಎಲ್ಲ ನಿಯಮಾವಳಿಗಳು ಬದಲಾವಣೆಯಾಗಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಸಹ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡಬೇಕಿದೆ, ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಪ್ರಧಾನಮಂತ್ರಿ ಹಾಗೂ ಕೇಂದ್ರ ಸಕ್ಕರೆ ಸಚಿವ ಶಿವರಾಜ್ಸಿಂಗ ಚವ್ಹಾಣ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೇಂದ್ರ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಲಿ, ನಿಯೋಗದೊಂದಿಗೆ ಕೇಂದ್ರ ಸರ್ಕಾರವ£Ä್ನ ಭೇಟಿ ಮಾಡಿ ಈ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡಲಿ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ರೈತರಿಗೆ ಒಳ್ಳೆಯದು ಮಾಡಲು ಸಮನ್ವಯ ಸಾಧಿಸಬೇಕಾಗುತ್ತದೆ, ಕಬ್ಬು ಬೆಳೆಗೆ ಬೆಲೆ ನಿಗದಿ, ಎಥೆನಾಲ್ ಖರೀದಿ ಪ್ರಮಾಣ ಹೆಚ್ಚಳ ಮೊದಲಾದ ಮಹತ್ವದ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ, ನಾನು ಕೇಂದ್ರ ಸರ್ಕಾರಕ್ಕೆ ದೂರುತ್ತಿಲ್ಲ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬ ಒತ್ತಾಯವನ್ನು ಮಾಡುತ್ತಿರುವೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಸದಾ ರೈತಪರ, ಬಡವರ ಪರ. ಯಾವ ಸರ್ಕಾರವೂ ಕಬ್ಬಿಗೆ ಬೆಂಬಲ ನೀಡಿರಲಿಲ್ಲ, ಈ ಹಿಂದೆ ನಮ್ಮ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ ಅವರು ೩೫೦ ರೂ. ಬೆಂಬಲ ಬೆಲೆ ನೀಡಿದ್ದರು, ಇಡೀ ಸರ್ಕಾರವೇ ಕಬ್ಬು ಬೆಳೆಗಾರರ ಪರವಾಗಿದೆ, ನಮ್ಮ ಸರ್ಕಾರ ಕಬ್ಬು ಬೆಳೆಗಾರರ ಪರವಾಗಿಯೇ ಇದೆ, ಇದರಲ್ಲಿ ಎಳ್ಳಷ್ಟೂ ಸಂಶಯ ಬೇಡ ಎಂದು ಕಬ್ಬು ಬೆಳೆಗಾರರಿಗೆ ಅಭಯ ತುಂಬಿದರು.


