ಮಗ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ದಾಖಲಿಸಿದ್ದ ಬೆಂಗಳೂರಿನ ಮಹಿಳೆಗೆ ಹೈಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿದೆ. ಎರಡು ವಾರದಲ್ಲಿ ದಂಡ ಕಟ್ಟದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದೆ.
ಪೊಲೀಸರ ಮೇಲಿನ ಕೋಪಕ್ಕೆ ಬೆಂಗಳೂರಿನ ಇಂದಿರಾನಗರ ನಿವಾಸಿ ತಾಯಿ ಮಹೇಶ್ವರಿ ಎಂಬವರು ಮಗ ಕೃಪಲಾನಿ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ಹಾಕಿದ್ದರು. ಪಕ್ಕದ ಮನೆಯವರು ರಾತ್ರಿ ಗಲಾಟೆ ಮಾಡುತ್ತಾರೆ, ಗಾಂಜಾ ಮಾರುತ್ತಾರೆಂದು ಕೃಪಲಾನಿ ದೂರು ನೀಡಿದ್ದ. ಈ ಬಗ್ಗೆ ಎನ್ಸಿಆರ್ ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು ತನಿಖೆ ನಡೆಸಿದಾಗ ಸುಳ್ಳು ಕೇಸ್ ಎಂದು ಗೊತ್ತಾಗಿತ್ತು.
ನಂತರ ಕೃಪಲಾನಿ ಇನ್ಸ್ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಕೃಪಲಾನಿ ದೂರು ನೀಡಿದ್ದ. ಇನ್ಸ್ಪೆಕ್ಟರ್ ಮೇಲಿನ ಸಿಟ್ಟಿಗೆ ತಾಯಿ ಮಹೇಶ್ವರಿಯಿಂದ ನನ್ನ ಮಗ ಕಾಣೆಯಾಗಿದ್ದಾನೆಂದು ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಹಾಕಿಸಿದ್ದ. ಪೊಲೀಸ್ ಠಾಣೆಗೆ ಹೋದವನು ವಾಪಸ್ ಬಂದಿಲ್ಲ ಎಂದು ತಾಯಿ ದೂರಿದ್ದರು.
ಕೃಪಲಾನಿ ದೂರು ನೀಡಿದ ನಂತರ ಚೆನ್ನೈನ ಹೋಟೆಲ್ನಲ್ಲಿ ತಂಗಿದ್ದ. ಸಿಡಿಆರ್ ತೆಗೆಸಿದ ಪೊಲೀಸರಿಗೆ ತಾಯಿ ಜೊತೆ ಮಗ ಸಂಪರ್ಕದಲ್ಲಿರುವುದು ಗೊತ್ತಾಗಿತ್ತು. ಬಳಿಕ ಪೊಲೀಸರು ಚೆನ್ನೈನಿಂದ ಕೃಪಲಾನಿಯನ್ನು ಕರೆತಂದು ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಇನ್ಸ್ಪೆಕ್ಟರ್ ಅನ್ನು ಸಿಲುಕಿಸಲು ಸುಳ್ಳು ಕೇಸ್ ಹಾಕಿಸಿದ್ದ ಬಗ್ಗೆ ಪೊಲೀಸರು ದಾಖಲೆ ಸಲ್ಲಿಸಿದ್ದಾರೆ.
ದೂರು ನೀಡಿದ್ದ ಮಹೇಶ್ವರಿಗೆ ಹೈಕೋರ್ಟ್ ಎರಡು ಲಕ್ಷ ರೂ. ದಂಡ ವಿಧಿಸಿದೆ. ಒಂದು ಲಕ್ಷ ರೂ. ಕಾನೂನು ಸೇವಾ ಪ್ರಾಧಿಕಾರಕ್ಕೆ ಹಾಗೂ ಒಂದು ಲಕ್ಷ ರೂ ಪೊಲೀಸ್ ಕಲ್ಯಾಣ ನಿಧಿಗೆ ನೀಡಲು ಹೈಕೋರ್ಟ್ ಸೂಚನೆ ನೀಡಿದೆ.