ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಸುಪ್ರೀಂಕೋರ್ಟ್ ಮತ್ತೊಮ್ಮೆ ಚಾಟಿ ಬೀಸಿದೆ.
ದರ್ಶನ್ ಹಾಗೂ ಸಹಚರರಿಗೆ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ಕಳೆದ ವಾರ ಹೈಕೋರ್ಟ್ ವಿವೇಚವನ ಬಳಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಮತ್ತೊಮ್ಮೆ ಅಧಿಕಾರದ ವಿಕೃತ ದುರ್ಬಳಕೆ ಎಂದು ಕಿಡಿ ಕಾರುವ ಮೂಲಕ ವಾರದಲ್ಲಿ ಎರಡನೇ ಬಾರಿ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಗುರುವಾರ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ. ಅಲ್ಲದೇ ಲಿಖಿತ ವಾದ ಮಂಡಿಸಲು ಒಂದು ವಾರದ ಗಡುವು ನೀಡಿದೆ.
ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ. “ನಾವು ಅಪರಾಧಿ ಅಂತ ಅಥವಾ ಖುಲಾಸೆಗೊಳಿಸಲು ಯಾವುದೇ ತೀರ್ಪು ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ವಾದ ಮಂಡಿಸಿದ ನಟಿ ಪವಿತ್ರಾ ಗೌಡ ಪರ ವಕೀಲರಿಗೆ ಹೇಳಿತು.
ಹೈಕೋರ್ಟ್ ಆದೇಶದಲ್ಲಿ ಬಳಸಿದ ಪದಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, 2024 ಡಿಸೆಂಬರ್ ನಲ್ಲಿ ಹೈಕೋರ್ಟ್ ನೀಡಿದ ತೀರ್ಪು ಖುಲಾಸೆ ಆದೇಶ ಎಂದು ಭಾವಿಸುತ್ತಿರಾ ಎಂದು ಅಸಮಾಧಾನ ವ್ಯಕ್ತಪಡಿಸಿತು.
“ಹೈಕೋರ್ಟ್ ಆದೇಶ ನೀಡಿದ ರೀತಿಗೆ ಪ್ರತಿಕ್ರಿಯಿಸಲು ಬೇಸರವಾಗುತ್ತದೆ. ಇತರ ಪ್ರಕರಣಗಳಲ್ಲಿಯೂ ಹೈಕೋರ್ಟ್ ಇದೇ ರೀತಿಯ ಆದೇಶವನ್ನು ನೀಡುತ್ತದೆಯೇ? ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಪ್ರಶ್ನಿಸಿದರು, ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಕಾರಣಗಳನ್ನು ಒದಗಿಸಲಾಗಿಲ್ಲ ಎಂದು ನೀಡಿರುವ ತೀರ್ಪು ತೀರಾ ಅಸಮಂಜಸ ಹಾಗೂ ಅಧಿಕಾರದ ದುರ್ಬಳಕೆಯ ಪರಮಾವಧಿ ಎಂದು ವಿವರಿಸಿದೆ.
ವಿಚಾರಣೆಯನ್ನು ಪ್ರತಿದಿನ ನಡೆಸಲಾಗುವುದು ಎಂದು ಹೇಳಲಾದ ನಂತರ ಸುಪ್ರೀಂ ಕೋರ್ಟ್ ಈಗಾಗಲೇ ಅಸಮಾಧಾನಗೊಂಡಿದ್ದು, ರಾಜ್ಯಕ್ಕೆ ಪ್ರಶ್ನೆಗಳನ್ನು ಕೇಳಿದೆ. ಇತರ ಆರೋಪಿಗಳು ವರ್ಷಗಳಿಂದ ಜೈಲಿನಲ್ಲಿ ತಮ್ಮ ಅವಕಾಶಕ್ಕಾಗಿ ಕಾಯುತ್ತಿರುವಾಗ ಈ ಪ್ರಕರಣವು ಏಕೆ ಅಂತಹ ಗಮನಕ್ಕೆ ಅರ್ಹವಾಗಿದೆ ಎಂದು ನ್ಯಾಯಮೂರ್ತಿ ಪಾರ್ದಿವಾಲಾ ಕೇಳಿದರು.