ಕಾರವಾರ ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ಸುರಿದ ಮಳೆಗೆ ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.
ಕಳೆದ ಎರಡು ದಿನದಿಂದ ಶಿರಸಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ನಲ್ಲಿ ಗುಡ್ಡ ಕುಸಿತವಾಗುತಿತ್ತು. ಕುಸಿದ ಗುಡ್ಡದ ಮಣ್ಣು ತೆಗೆದು ಶನಿವಾರ ರಾತ್ರಿ ಲಘು ವಾಹನ ಸಂಚಾರಕ್ಕೆ ಬಿಡಲಾಗಿತ್ತು. ಅದೇ ಜಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ಹೆದ್ದಾರಿ ಮೇಲೆ ಕಲ್ಲು, ಮರಗಳು ಬಿದ್ದಿವೆ. ಹೀಗಾಗಿ ಬೆಳಗ್ಗಿನಿಂದ ಕುಮಟಾ-ಶಿರಸಿಯ ಹೆದ್ದಾರಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಕಾರವಾರದಲ್ಲಿ 24 ಗಂಟೆಗಳ ಅವಧಿಯಲ್ಲಿ 23.7 ಮೀ.ಮೀ ಮಳೆಯಾಗಿದ್ದು, ಹಾನಿಗೊಳಗಾದ 35 ಜನರಿಗೆ ಅರಗಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕಾಳಜಿ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ. ಕಾರವಾರ, ಅಂಕೋಲಾ, ಹೊನ್ನಾವರ ಹಾಗೂ ಭಟ್ಕಳ ಭಾಗದಲ್ಲಿ ಕಳೆದ ಸಂಜೆಯೂ ಭಾರೀ ಮಳೆಯಾಗಿದೆ.