ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್ದೀಪ್ ಸುರ್ಜೇವಾಲ ಹೇಳಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ನಾಯಕರ ಮೇಲಿನ ಬಿಜೆಪಿ ದ್ವೇಷವು ಎಷ್ಟು ಕ್ರೂರವಾಗಿದೆ ಎಂದರೆ, ನ್ಯಾಯದ ಪ್ರಜ್ಞೆಯೇ ಅವರಿಗೆ ಕಳೆದು ಹೋಗಿದೆ ಅನ್ನಿಸುತ್ತೆ. ದ್ವೇಷ ರಾಜಕೀಯ ಅನ್ನೋದು ಬಿಜೆಪಿಯ ನರನಾಡಿಯಲ್ಲೂ ಹರಿದಾಡುತ್ತಿದೆ ಅನ್ನಿಸುತ್ತೆ, ಅದಕ್ಕಾಗಿ ಕೇವಲ ರಾಜಕೀಯ ದ್ವೇಷದಿಂದ ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡಲು ಸರ್ಕಾರಿ ಏಜೆನ್ಸಿಗಳನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾರ್ಮಿಕ ಪೋಸ್ಟ್ ಮಾಡಿದ್ದು, ಇವರ ಇಡಿ ದಾಳಿ ಕೇವಲ ರಾಜಕೀಯ ಪ್ರೇರಿತ ಅನ್ನೋದು ಕನ್ನಡಿಯಲ್ಲಿ ಕಂಡಷ್ಟೇ ಸತ್ಯ, ಕಳೆದ 10 ವರ್ಷಗಳಲ್ಲಿ ರಾಜಕೀಯ ಪ್ರೇರಿತ 193 ಇಡಿ ಕೇಸ್ ಗಳು ದಾಖಲಾಗಿವೆ. ಆದರೆ ಶಿಕ್ಷೆ ದೊರಕಿರುವುದು ಮಾತ್ರ ಎರಡೇ ಎರಡು ಪ್ರಕರಣಗಳಲ್ಲಿ.ಅಂದರೆ ಇವರು ಗೊಂಬೆಯಾಟದ ಇಡಿಯನ್ನು ಬಳಸುತ್ತಿರುವುದು ವಿರೋಧ ಪಕ್ಷಗಳನ್ನು ಹೆದರಿಸಲು ಮತ್ತು ಹಣಿಯಲು ಅಷ್ಟೇ ಎಂದು ಹೇಳಿದ್ದಾರೆ.
ಬಡವರು, ರೈತರು, ಮಧ್ಯಮವರ್ಗದವರೂ ಸೇರಿದಂತೆ ಎಲ್ಲಾ ವರ್ಗದ ಏಳಿಗೆಗಾಗಿ ದುಡಿಯುತ್ತಿರುವ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಮಸಿ ಬಳಿಯಲು ಬಿಜೆಪಿ ವಾಮ ಮಾರ್ಗಗಳನ್ನು ಅನುಸರಿಸುವ ದುಷ್ಟ ಪ್ರಯತ್ನಕ್ಕೆ ಕೈ ಹಾಕಿದೆ. ಇದಕ್ಕಾಗಿ ಕಾಂಗ್ರೆಸ್ನ ಪರಿಶಿಷ್ಟ ಪಂಗಡದ ಸಂಸದ ಶ್ರೀ ತುಕಾರಾಂ, ಪರಿಶಿಷ್ಟ ಪಂಗಡದ ಶಾಸಕರಾದ ಶ್ರೀ ನಾಗೇಂದ್ರ, ಶ್ರೀ ಕಂಪ್ಲಿ ಗಣೇಶ್ ಮತ್ತು ಶ್ರೀ ಶ್ರೀನಿವಾಸ್, ಜೊತೆಗೆ ಶಾಸಕ ಭರತ್ ರೆಡ್ಡಿ ಅವರ ಮೇಲೆ ಇಡಿ ದಾಳಿ ನಡೆಸಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ, ಬಿಜೆಪಿಯ ಕೈಗೊಂಬೆ ED, ಈಗ ಕಾಂಗ್ರೆಸ್ ಶಾಸಕರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಯ ನಿದ್ದೆ ಕೆಡಿಸಿದ್ಯಾ?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ನಾಯಕರ ಮೇಲಿನ ಬಿಜೆಪಿ ದ್ವೇಷವು ಎಷ್ಟು ಕ್ರೂರವಾಗಿದೆ ಎಂದರೆ, ನ್ಯಾಯದ ಪ್ರಜ್ಞೆಯೇ ಅವರಿಗೆ ಕಳೆದು ಹೋಗಿದೆ ಅನ್ನಿಸುತ್ತೆ…
ಬಡವರು, ರೈತರು, ಮಧ್ಯಮವರ್ಗದವರೂ ಸೇರಿದಂತೆ ಎಲ್ಲಾ ವರ್ಗದ…
— Randeep Singh Surjewala (@rssurjewala) June 11, 2025
ಈ ಹಿಂದೆ, ಬಿಜೆಪಿ ಇದೇ ದುರುದ್ದೇಶಪೂರಿತ ಇಡಿ ಯಂತ್ರವನ್ನು ಬಳಸಿ ಒಬಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಣ್ಣಿನ ಮಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲೂ ಇದೇ ರೀತಿಯ ದಾಳಿಗೆ ಸಂಚು ನಡೆಸಿತ್ತು. ನಂತರ ದಲಿತ ನಾಯಕ ಮತ್ತು ಗೃಹ ಸಚಿವ ಡಾ. ಪರಮೇಶ್ವರ್ ಅವರ ಮೇಲೂ ಇಡಿ ದಾಳಿಗಳನ್ನು ನಡೆಸಿತು, ಈಗ ಪರಿಶಿಷ್ಟ ಪಂಗಡದ ಸಂಸದರು ಮತ್ತು ಶಾಸಕರ ಮೇಲೆ ದಾಳಿ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಇಟ್ಟಂತೆ ಆಡಳಿತ ನಡೆಸುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟೇ ದುಷ್ಟಪ್ರಯತ್ನಗಳಿಗೆ ಕೈ ಹಾಕಿದರೂ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನಾಗಲಿ ಅಥವಾ ಪ್ರಜಾ ಪ್ರಭುತ್ವವನ್ನು ದುರ್ಬಲಗೊಳಿಸಲಾಗಲಿ ಸಾಧ್ಯವಿಲ್ಲ ಎಂದಿದ್ದಾರೆ.