Menu

ಸಂಕಷ್ಟದಲ್ಲಿ ಸರ್ಕಾರ, ಜಿಲ್ಲಾಡಳಿತ ಜನರ ಜೊತೆಗಿರಲಿದೆ: ಸಚಿವ ಲಾಡ್‌

ಧಾರವಾಡದ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ಉಂಟಾದ ಹಾನಿಯನ್ನು ಗ್ರಾಮದ ಉದ್ದಗಲಕ್ಕೂ ಸಂಚರಿಸಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್  ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.

ಮಾಚಾಪುರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆಯಿಂದ ತೊಂದರೆಗೆ ಈಡಾದ ಸಾರ್ವಜನಿಕರ ಕುಂದು ಕೊರತೆಗಳನ್ನು  ವಿಚಾರಿದರು. ಹಾನಿಗೊಂಡ ಮನೆಗಳಿಗೆ ತುರ್ತು ನೆರವು ನೀಡಲು ಸಂತೋಷ್ ಲಾಡ್ ಫೌಂಡೇಶನ್ ಮುಖಾಂತರ ಗ್ರಾಮಕ್ಕೆ 50,000 ಮೇಲ್ಚಾವಣಿ ಹಂಚುಗಳು ವಿತರಿಸಲಾಗಿತ್ತು. ಇದರಿಂದ ತಾತ್ಕಾಲಿಕವಾಗಿ ಮನೆ ಹಾನಿಗೊಂಡ ಕುಟುಂಬಗಳು ಸುರಕ್ಷಿತ ವಾಸಸ್ಥಳವನ್ನು ಹೊಂದಿದರೆ ಎಂದು ಅವರು ಪರಿಶೀಲಿಸಿದರು.

ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಅವರು, ಸಂಕಷ್ಟದ ಸಮಯದಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ನಿಮ್ಮೊಂದಿಗಿದೆ ಇರುತ್ತದೆ ಎಂದು ಭರವಸೆ ನೀಡಿದರು.  ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಗ್ರಾಮದ ಪ್ರತಿ ಹೊಲಕ್ಕೂ ಭೇಟಿ ನೀಡಿ ಶೀಘ್ರವಾಗಿ ಹಾನಿಯ ವರದಿಯನ್ನು ಸಿದ್ಧಪಡಿಸಬೇಕು. ಹಾನಿಯ ಪ್ರಮಾಣವನ್ನು ನಿಖರವಾಗಿ ಅಂದಾಜಿಸಿ, ಅರ್ಹ ರೈತರಿಗೆ ವಿಳಂಬವಾಗದೆ ಪರಿಹಾರವನ್ನು ನೀಡಬೇಕು ಎಂದು ಹೇಳಿದರು.

ಜಾನುವಾರ ಹಾನಿಗೆ ಪರಿಹಾರ ಚೆಕ್ ವಿತರಣೆ: ಮಾಚಾಪುರ ಗ್ರಾಮದಲ್ಲಿ ಅನಿರೀಕ್ಷಿತ ಮಳೆಯಿಂದಾಗಿ ಜಾನುವಾರು ಪ್ರಾಣಹಾನಿ ಆಗಿದ್ದ ಫಲಾನುಭವಿಗಳಾದ ಕಲ್ಕಪ್ಪ ಬಸವಂತಪ್ಪ ಹುರಕಡ್ಲಿ, ನಿಂಗಪ್ಪ ತಿಪ್ಪಣ್ಣ ರಾಮನಕೊಪ್ಪ, ನಾಗಪ್ಪ ಫಕ್ಕೀರಪ್ಪ ಇಂದೂರ ಅವರಿಗೆ ಸ್ಥಳದಲ್ಲಿಯೇ ಜಿಲ್ಲಾಡಳಿತವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು, ತಲಾ ರೂ.20 ಸಾವಿರ ಪರಿಹಾರದ ಮೊತ್ತದ ಚಕ್ ವಿತರಿಸಿದರು.

ಬೆಳೆ ಹಾನಿ ಜಮೀನಿಗೆ ಸಚಿವರ ಭೇಟಿ: ಸಚಿವ ಸಂತೋಷ ಲಾಡ ಅವರು ಆಲಿಕಲ್ಲು ಮಳೆಯಿಂದ ಬೆಳೆ ಹಾನಿಯಾದ ಮಾಚಾಪುರ ಗ್ರಾಮದ ರೈತ ಸಂತೋಜಿ ಹುಳಿ ಹೊಂಡ  ಅವರ ಜಮೀನಿಗೆ ಭೇಟಿ ನೀಡಿ, ಕಬ್ಬು, ಗೋವಿನಜೋಳ ಮತ್ತು ಮಾವು ಬೆಖೆ ಹಾನಿಯಾದ ಬಗ್ಗೆ ಪರಿಶೀಲಿಸಿದರು.

ಇಂತಹ ಬೆಳೆಗಳೊಂದಿಗೆ ಅನೇಕ ರೈತರ ಜಮೀನುಗಳಲ್ಲಿನ ಪೈಪ್, ಮತ್ತು ಇತರ ಪರಿಕರಗಳು ಹಾಳಾದ ಬಗ್ಗೆ ಹಾಗೂ ಅಡಿಕೆ ನಾಟಿ ಮಾಡಲು ತಂದಿದ್ದ ಅಡಿಕೆ ಸಸಿ ಹಾನಿಯಾದ ಬಗ್ಗೆ ರೈತರಿಂದ ಮಾಹಿತಿ ಒಡೆದುಕೊಂಡರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಮೀಕ್ಷೆ ಮಾಡಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು  ಸೂಚಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಉಪವಿಭಾಗಾದಿಕಾರಿ ಶಾಲಂ ಹುಸೇನ್, ಕಲಘಟಗಿ ತಹಸೀಲ್ದಾರ್ ಬಸವರಾಜ ಹೊಂಕಣ್ಣವರ, ತಾಲೂಕಾ ಪಂಚಾಯತ್ತ ಕಾರ್ಯನಿವಾರ್ಹಕ ಅಧಿಕಾರಿ ಪಿ.ವಾಯ್. ಸಾವಂತ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕಿ ಶ್ರೀದೇವಿ ಎ. ಎಸ್. ಸೇರಿದಂತೆ ವಿವಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *