ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತುರ್ತು ಕರೆ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಮರಳಿದ್ದಾರೆ.
ಕೋಚ್ ಅನುಪಸ್ಥಿತಿಯಲ್ಲಿ ಭಾರತ ಎ ವಿರುದ್ಧದ ಭಾರತ ಟೆಸ್ಟ್ ತಂಡಗಳ ನಡುವಣ ಮುಚ್ಚಿದ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ಆರಂಭಗೊಂಡಿದೆ.
ಕುಟುಂಬದಿಂದ ತುರ್ತು ಕರೆ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಬರ್ಮಿಂಗ್ ಹ್ಯಾಂನಿಂದ ದೆಹಲಿಗೆ ಮರಳಿದ್ದಾರೆ.
ಗಂಭೀರ್ ಅನುಪಸ್ಥಿತಿಯಲ್ಲಿ ಬೌಲಿಂಗ್ ಕೋಚ್ ಮೊರ್ನೆ ಮೊರ್ಕಲ್, ಸಹಾಯಕ ಕೋಚ್ ಗಳಾದ ಸಿತಾಂಶು ಕೋಟಕ್ ಮತ್ತು ರಿಯಾನ್ ಡೆನ್ ಡೊಶೆಟೆ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಜೂನ್ 20ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದ್ದು, ಇದಕ್ಕೂ ಮುನ್ನ ಆಟಗಾರರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಭಾರತ ತಂಡ ಹಾಗೂ ಭಾರತ ಎ ತಂಡಗಳ ನಡುವಣ ಅಭ್ಯಾಸ ಪಂದ್ಯ ಏರ್ಪಡಿಸಲಾಗಿದೆ.
ಶುಭಮನ್ ಗಿಲ್ ನೇತೃತ್ವದ ತಂಡ ಕಳೆದ ಮೂರು ದಿನಗಳಿಂದ ಕಠಿಣ ಅಭ್ಯಾಸ ನಡೆಸಿದ್ದು, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆಯೇ ಎಂಬುದು ಕಾದು ನೋಡಬೇಕಾಗಿದೆ.