ಮುಂಬೈ ಸ್ಫೋಟ ಪ್ರಕರಣಗಳನ್ನು ನಿರ್ವಹಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ, 26/11 ಮುಂಬೈ ದಾಳಿ ಪ್ರಕರಣದಲ್ಲಿ ಉಗ್ರ ಅಜ್ಮಲ್ ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಸಮಾಜ ಸೇವಕ ಸಿ ಸದಾನಂದನ್ ಮಾಸ್ಟರ್ ಮತ್ತು ಇತಿಹಾಸಕಾರರಾದ ಮೀನಾಕ್ಷಿ ಜೈನ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.
ರಾಷ್ಟ್ರಪತಿ ರಾಜ್ಯಸಭೆಗೆ ಗರಿಷ್ಠ 12 ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶಿತರು ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆಯ ಕ್ಷೇತ್ರಗಳಿಂದ ಬಂದಿರಬೇಕು. ಮೇಲ್ಮನೆಯಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನಗಳಿಗೆ ಈ ನಾಲ್ವರನ್ನು ಆಯ್ಕೆ ಮಾಡಲಾಗಿದೆ.
72 ವರ್ಷದ ಉಜ್ವಲ್ ನಿಕಮ್ 1993ರ ಮುಂಬೈ ಸ್ಫೋಟಗಳು ಮತ್ತು 26/11 ದಾಳಿಗಳಂತಹ ಪ್ರಮುಖ ಭಯೋತ್ಪಾದನಾ ಪ್ರಕರಣಗಳಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕೆಲಸ ಮಾಡಿದ್ದಾರೆ. ಸಂಗೀತ ದಿಗ್ಗಜ ಗುಲ್ಶನ್ ಕುಮಾರ್ ಮತ್ತು ಬಿಜೆಪಿಯ ಪ್ರಮೋದ್ ಮಹಾಜನ್ ಅವರ ಕೊಲೆ ಪ್ರಕರಣಗಳ ತನಿಖೆಯಲ್ಲೂ ವಾದ ಮಂಡಿಸಿದ್ದರು.
ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ,ಬಿಜೆಪಿ ಮುಂಬೈ ನಾರ್ತ್ ಸೆಂಟ್ರಲ್ ಸ್ಥಾನದಿಂದ ನಿಕಮ್ ಅವರನ್ನು ಕಣಕ್ಕಿಳಿಸಿತ್ತು, ಅವರು ಕಾಂಗ್ರೆಸ್ನ ವರ್ಷಾ ಗಾಯಕ್ವಾಡ್ ವಿರುದ್ಧ ಸೋತಿದ್ದರು. ನಿಕಮ್ ಅವರಿಗೆ 2016 ರಲ್ಲಿ ಪದ್ಮಶ್ರೀ ಪ್ರಶಸ್ತಿಯ ಗೌರವ ಲಭಿಸಿತ್ತು. ಹರ್ಷವರ್ಧನ್ ಶ್ರಿಂಗ್ಲಾ ಜನವರಿ 2020 ಮತ್ತು ಏಪ್ರಿಲ್ 2022 ರ ನಡುವೆ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 2023 ರಲ್ಲಿ ಭಾರತ ಆಯೋಜಿಸಿದ್ದ ಜಿ 20 ಶೃಂಗಸಭೆಯ ಮುಖ್ಯ ಸಂಯೋಜಕರಾಗಿದ್ದರು. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ಮತ್ತು ಬಾಂಗ್ಲಾದೇಶಕ್ಕೆ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.
ಕೇರಳದ ಶಿಕ್ಷಣತಜ್ಞ ಸಿ ಸದಾನಂದನ್ ಮಾಸ್ಟರ್ ಅವರನ್ನು ಮೂರು ದಶಕಗಳ ಹಿಂದೆ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿ ಕಾಲುಗಳನ್ನು ಕತ್ತರಿಸಿದ್ದರು. 2016 ರ ಕೇರಳ ಚುನಾವಣೆಯಲ್ಲಿ ಕುತುಪರಂಬದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ರಾಜಕೀಯ ತಜ್ಞೆ ಮತ್ತು ಇತಿಹಾಸಕಾರರಾಗಿರುವ ಮೀನಾಕ್ಷಿ ಜೈನ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2020 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಅವರು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.