ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯನ್ನು 27ನೇ ಜೂನ್ 2025ರ (ಶುಕ್ರವಾರ) ಆಚರಿಸಲಾಗುತ್ತಿದ್ದು, ಬೆಂಗಳೂರು ನಗರ ಸುಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ (ಮಾಗಡಿ ರಸ್ತೆ) ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ ಬೆಳಗ್ಗೆ 12.15 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಮುಂಭಾಗದ ಕೆಂಪೇಗೌಡರ ಪ್ರತಿಮೆ ಬಳಿ ಗುರುವಾರ ರಾತ್ರಿ ಆಯೋಜಿಸಿದ್ದ ಬಂಡಿ ದೇವರ ಉತ್ಸವದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು. ರಾಜ್ಯಮಟ್ಟದ ಕಾರ್ಯಕ್ರಮವನ್ನು ಡಾ. ಬಾಬು ಜಗಜೀವನ್ ರಾಂ ಭವನ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಬಿಬಿಎಂಪಿ) ಮಟ್ಟದ ಕಾರ್ಯಕ್ರಮವನ್ನು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದರು.
ಕೆಂಪೇಗೌಡರ ಜಯಂತಿಯ ದಿನದಂದು ನಾಲ್ಕು ದಿಕ್ಕುಗಳಾದ ಲಾಲ್ ಬಾಗ್, ಮೇಕ್ರಿ ವೃತ್ತ, ಕೆಂಪಾಂಬುದಿ ಕೆರೆ ಹಾಗೂ ಹಲಸೂರು ಗಡಿ ಗೋಪುರಗಳಿಂದ ಹಾಗೂ 3 ಐತಿಹಾಸಿಕ ಸ್ಥಳಗಳಾದ ಮಾಗಡಿ ಕೆಂಪಾಪುರ, ದೇವನಹಳ್ಳಿ ಆವತಿ ಹಾಗೂ ಕುಣಿಗಲ್ ಹುತ್ರಿದುರ್ಗ ಸೇರಿದಂತೆ ಒಟ್ಟು 7 ಸ್ಥಳಗಳಿಂದ ಸಚಿವರುಗಳ ನೇತೃತ್ವದಲ್ಲಿ ಪುರ ಜ್ಯೋತಿಗಳ ಮೆರವಣಿಗೆ ಹೊರಟು, ಸುಮ್ಮನಹಳ್ಳಿ ವೃತ್ತದ ಬಳಿಯ ಹೊರವರ್ತುಲ ರಸ್ತೆ (ಮಾಗಡಿ ರಸ್ತೆ) ಯಲ್ಲಿ ಕೆಂಪೇಗೌಡ ಭವನದ ನಿರ್ಮಾಣ ಸ್ಥಳಕ್ಕೆ 7 ಪುರ ಜ್ಯೋತಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಳಗ್ಗೆ 9.00ಕ್ಕೆ: ಅಂತರಾಷ್ಟ್ರಿಯ ವಿಮಾನ ನಿಲ್ದಾಣದ ಹತ್ತಿರ ಸ್ಥಾಪಿಸಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ, ಬೆಳಗ್ಗೆ 10.30ಕ್ಕೆ: ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ನಾಡಪ್ರಭು ಕೆಂಪೇಗೌಡರ ಮತ್ತು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಮಹಾತ್ಯಾಗಿ ಲಕ್ಷ್ಮಿದೇವಿ ಪ್ರತಿಮೆ ಬೆಳಗ್ಗೆ 11.11ಕ್ಕೆ: ವಿಧಾನ ಸೌಧ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆಗಳಿಗೆ ಪುಷ್ಪ ನಮನವಿದೆ.
ಸುಮ್ಮನಹಳ್ಳಿ ಬಳಿಯಿರುವ ಡಾ. ಬಾಬು ಜಗಜೀವನ್ ರಾಂ ಭವನದಲ್ಲಿ ರಾಜ್ಯಮಟ್ಟದ ವೇದಿಕೆ ಕಾರ್ಯಕ್ರಮವು ಅಪರಾಹ್ನ 12.30ಕ್ಕೆ ನಡೆಯಲಿದ್ದು, ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಗಳು, ಮಠಾಧೀಶರುಗಳು, ಮಾನ್ಯ ಸಚಿವರುಗಳು ಹಾಗೂ ಇನ್ನಿತರೆ ಗಣ್ಯರುಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಬಿಬಿಎಂಪಿ ಮಟ್ಟದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮವು ಸಂಜೆ 4.30 ರಿಂದ 6.00 ಗಂಟೆಯವರೆಗೆ ನಡೆಯಲಿದ್ದು, ಮಾನ್ಯ ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸಂಜೆ 6.00 ಗಂಟೆಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಹಾಗೂ ಉತ್ತಮ ಅಧಿಕಾರಿ ನೌಕಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಉತ್ಸವ ಸಮಿತಿಯ ಜಯರಾಮ್ ರಾಯಪುರೆ ಮತ್ತಿತರರು ಉಪಸ್ಥಿತರಿದ್ದರು.