ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ವಿಷ ಪ್ರಾಶನದಿಂದಲೇ ಮೃತ ಪಟ್ಟಿರುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್
ದೃಢಪಡಿಸಿದ್ದಾರೆ.
ತಾಯಿ ಹುಲಿಗೆ 8 ವರ್ಷ, ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಪಟ್ಟಿದೆ. ಯಾವ ಪ್ರಮಾಣದ ವಿಷ, ಹುಲಿ ಬೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದೆಯೇ, ಮೊದಲೇ ಹಸುವಿಗೆ ವಿಷ ಪ್ರಾಶನ ಮಾಡಲಾಗಿತ್ತಾ ಎಂಬ ಎಲ್ಲ ಖಚಿತ ಮಾಹಿತಿಗಳು ಲ್ಯಾಬ್ ವರದಿ ಬಂದ ಬಳಿಕ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.
ಹುಲಿ ಹಸುವಿನ ಹಿಂಬಂದಿಯಿಂದ ದಾಳಿ ಮಾಡಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಇಲಾಖಾ ಮಟ್ಟದ ತನಿಖೆಯ ಬಳಿಕ ನಿರ್ಧರಿಸಲಾಗುತ್ತದೆ ಎಂದಿದ್ದಾರೆ.
ವಾಚರ್ ಗಳಿಗೆ ಸಂಬಳ ತಡವಾಗಿದೆ ಎಂಬುದಕ್ಕೆ ಗಸ್ತು ಮಾಡಿಲ್ಲ ಎಂಬ ಆರೋಪವಿದ್ದು, ಈ ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ. ಹಸು ಯಾರದ್ದು ಎಂಬುದನ್ನೂ ತನಿಖೆ ಮಾಡುತ್ತಿದ್ದೇವೆ. ಈ ಹಸು ತಮಿಳುನಾಡಿನಿಂದ ಬಂದಿರುವುದಾ ಅಥವಾ ಸ್ಥಳೀಯರದ್ದಾ ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.