ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಠಾಣೆಯಲ್ಲಿ ಕೆಲಸ ಮಾಡ್ತಿದ್ದ ಮಹಿಳಾ ಪೇದೆಗೆ ಹೆಡ್ ಕಾನ್ಸ್ಟೇಬಲ್ ಬಿ.ಜಿ.ಗೋವಿಂದರಾಜು ಬೂಟ್ ಕಾಲಿನಲ್ಲಿ ಒದ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ರಾತ್ರಿ ಸಿಬ್ಬಂದಿ ನಡುವೆ ಗಲಾಟೆ ನಡೆದಿದೆ. ಕಂಪ್ಯೂಟರ್ ವಿಭಾಗದಲ್ಲಿ ಪೇದೆ ರೇಣುಕಾ ಕರ್ತವ್ಯ ನಿರ್ವಹಿಸುತ್ತಿದ್ದರಂತೆ. ಈ ವೇಳೆ ಠಾಣೆಯ ಎಎಸ್ಐ ತಿಮ್ಮೇಗೌಡ ಠಾಣೆಯಲ್ಲಿರುವ ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಮಹಿಳಾ ಪೇದೆಗೆ ಹೇಳಿದ್ದರು. ಹೆಣ್ಣು ಮಕ್ಕಳನ್ನು ತನಿಖಾ ಸಹಾಯಕರ ಕೊಠಡಿಗೆ ಕರೆದೊಯ್ದು ರೇಣುಕಾ ಊಟ ಮಾಡಿಸಿದ್ದಾರೆ. ಈ ವೇಳೆ ಹೆಡ್ ಕಾನ್ಸ್ಟೇಬಲ್ ಗೋವಿಂದರಾಜು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ರೇಣುಕಾಗೆ ಗೋವಿಂದರಾಜು ನಿಂದಿಸಿ ಶೂ ಕಾಲಿನಿಂದ 3-4 ಬಾರಿ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ತವ್ಯದಲ್ಲಿದ್ದ ಎಎಸ್ಐ ತಿಮ್ಮೇಗೌಡ, ಕಾನ್ಸ್ಟೇಬಲ್ ಗಳಾದ ಬಸಪ್ಪ, ಮಹೇಶ್ ಆತನನ್ನು ಬಿಡಿಸಲು ಯತ್ನಿಸಿದೂ ಹಲ್ಲೆ ನಡೆಸಿದ್ದಾರೆ. ರೇಣುಕಾನೀಡಿರುವ ದೂರು ಆಧರಿಸಿ ಹೆಡ್ ಕಾನ್ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
10-06-2025ರಂದು ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾಗ ಎಎಸ್ಐ ತಿಮ್ಮೇಗೌಡ ಠಾಣೆಯಲ್ಲಿರುವ, ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು ಹೇಳಿದ್ದರು. ನಾನು ಊಟ ಕೊಟ್ಟು ಬಂದಿದ್ದೆ. ಊಟ ಮಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳು, ನಿಮ್ಮ ಕಾನ್ಸ್ಟೇಬಲ್ ಹೆಣ್ಣುಮಕ್ಕಳ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಿದರು ಎಂದಿದ್ದಾರೆ. ಯಾಕೆ ಹೆಣ್ಮಕ್ಕಳ ಬಗ್ಗೆ ಅಷ್ಟೊಂದು ಕೆಟ್ಟದಾಗಿ ಮಾತಾಡಿದ್ದೀರಾ ಎಂದು ನಾನು ಗೋವಿಂದರಾಜು ಅವರನ್ನು ಪ್ರಶ್ನೆ ಮಾಡಿದೆ. ಈ ವೇಳೆ ನನ್ನನ್ನೇ ಬೈಯ್ಯಲು ಶುರು ಮಾಡಿ 3-4 ಬಾರಿ ಬೂಟಿನ ಕಾಲಿನಲ್ಲಿ ಒದ್ದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದು ಕೊಳ್ಳುವಂತೆ ಪೇದೆ ರೇಣುಕಾ ದೂರಿನಲ್ಲಿ ಆಗ್ರಹಿಸಿದ್ದಾರೆ.