ಗುಂಡ್ಲುಪೇಟೆ : ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿದ್ದ ಇಬ್ಬರು ಪ್ರವಾಸಿಗರಿಗೆ ಅರಣ್ಯ ಇಲಾಖೆ 25 ಸಾವಿರ ರೂ.ದಂಡ ವಿಧಿಸಿ, ಮುಚ್ಚಳಿಕೆ ಪತ್ರ ಬರೆಸಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದ್ದು, ಇಬ್ಬರು ಬಂಡೀಪುರದ ಪ್ರವಾಸದ ಸಂದರ್ಭದಲ್ಲಿ ಮಂಗಲ ಸಮೀಪ ರಸ್ತೆಯ ಕಾಡಿನೊಳಗೆ ಅತಿಕ್ರಮವಾಗಿ ಪ್ರವೇಶಿಸಿ ಕಾಡಿನಲ್ಲಿ ಫೋಟೋ ಶೂಟ್ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರು ಅವರುಗಳನ್ನು ಗಮನಿಸಿ ಅನುಮತಿ ಇಲ್ಲದೆ ಅರಣ್ಯದ ಒಳಗಿನ ರಸ್ತೆಯಲ್ಲಿ ಇಬ್ಬರು ಪ್ರವಾಸಿಗರು ಫೋಟೋ ಶೂಟ್ ಮಾಡುತ್ತಿದ್ದನ್ನು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳೀಯರಿಂದ ಮಾಹಿತಿ ದೊರೆತ ತಕ್ಷಣ ಕಾರ್ಯ ಪ್ರವೃತ್ತರಾದ ಬಂಡೀಪುರ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಕುಮಾರ್ ಮತ್ತು ತಂಡ ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿದ್ದ ವ್ಯಕ್ತಿಗಳನ್ನು ಗುರುತಿಸಿ, ನಂತರ ಅವರುಗಳನ್ನು ಕರೆಸಿ 25 ಸಾವಿರ ರೂ. ದಂಡ ವಿಧಿಸುವ ಜೊತೆಗೆ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಮತ್ತೊಮ್ಮೆ ಕಾಡಿಗೆ ಅತಿಕ್ರಮ ಪ್ರವೇಶ ಮಾಡದಂತೆ ಹಾಗೂ ಮುಂದಾಗುವ ಅನಾಹುತಗಳ ಬಗ್ಗೆ ಮಾಹಿತಿ ತಿಳಿಸಿ ಎಚ್ಚರಿಕೆ ನೀಡಿದರು.
ನಂತರ ಉದಯಕಾಲ ಹೊಂದಿಗೆ ಮಾತನಾಡಿದ ಎಸಿಎಫ್ ನವೀನ್ ಕುಮಾರ್ ಪ್ರವಾಸಿಗರು ಅರಣ್ಯ ಪ್ರದೇಶದ ಪ್ರವಾಸದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಪ್ರತಿಯೊಂದು ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವ ಜೊತೆಗೆ ಅರಣ್ಯ ಹಾಗೂ ವನ್ಯ ಪ್ರಾಣಿಗಳಿಗೆ ತೊಂದರೆ ಉಂಟಾಗದಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.