ಬೆಂಗಳೂರಿನ ಬ್ಯಾಡರಹಳ್ಳಿಯ ತಿಗಳರಪಾಳ್ಯದಲ್ಲಿ ಪತಿ ಜೊತೆ ಜಗಳವಾಡಿದ ಬಳಿಕವೂ ಕೋಪ ತಣಿಯದ ಪತ್ನಿ ಇಲಿ ಪಾಷಾಣ ಬೆರಸಿ ಚಹಾ ಕುಡಿದು ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದರೆ, ಅದೇ ಚಹಾ ಕುಡಿದ ಮಗು ಮೃತಪಟ್ಟಿದೆ.
ಒಂದು ವರ್ಷ ಎಂಟು ತಿಂಗಳ ಮಗು ಚಾರ್ವಿ ಮೃತಪಟ್ಟಿದ್ದರೆ, ತಾಯಿ ಚಂದ್ರಿಕಾ (26) ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ. ತಿಗಳರಪಾಳ್ಯದಲ್ಲಿ ಯೋಗೇಶ್, ಚಂದ್ರಿಕಾ ದಂಪತಿ ನೆಲೆಸಿದ್ದು ಕೌಟುಂಬಿಕ ವಿಚಾರವಾಗಿ ಇವರಿಬ್ಬರಲ್ಲಿ ಜಗಳ ನಡೆದ ನಂತರ ಯೋಗೇಶ್ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದರು. ಬಳಿಕ ಚಂದ್ರಿಕಾ ಚಹಾಗೆ ಇಲಿ ಪಾಷಾಣ ಬೆರಸಿ ಮಗಳಿಗೆ ಕುಡಿಸಿ ತಾನೂ ಕುಡಿದಿದ್ದಾಳೆ.
ಇಲಿ ಪಾಷಾಣ ಸೇವಿಸಿದ ಬಳಿಕ ಪತಿಗೆ ಕರೆ ಮಾಡಿ ಚಂದ್ರಿಕಾ ವಿಷಯ ತಿಳಿಸಿದ್ದಾಳೆ. ಕೂಡಲೇ ಮನೆ ಬಳಿ ಬಂದು ಮಗು ಮತ್ತು ಪತ್ನಿಯನ್ನ ಯೋಗೇಶ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚಾರ್ವಿ ಸಾವನ್ನಪ್ಪಿದರೆ, ಚಂದ್ರಿಕಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.