ಇರಾನ್ ಮೇಲೆ ಅಮೆರಿಕ ದಾಳಿ ನಡೆಸುವ ಸಾಧ್ಯತೆ ಹೆಚ್ಚಿದ್ದು, ಭಾರತೀಯ ವಿದೇಶಾಂಗ ಇಲಾಖೆಯು ಅಲ್ಲಿ ನೆಲೆಸಿರುವ ಭಾರತೀಯರಿಗೆ ಎಚ್ಚರಿಕೆ ನೀಡಿ, ಆ ದೇಶವನ್ನು ತೊರೆಯಲು ಸೂಚಿಸಿದೆ. ಆದಷ್ಟು ಬೇಗ ಲಭ್ಯವಿರುವ ವಿಮಾನಗಳ ಮೂಲಕ ಭಾರತಕ್ಕೆ ಮರಳಲು ತಿಳಿಸಿದೆ.
ಇರಾನ್ನಲ್ಲಿನ ಭದ್ರತಾ ಪರಿಸ್ಥಿತಿ ಹದಗೆಟ್ಟಿದೆ. ಸದ್ಯ ಭಾರತೀಯ ನಾಗರಿಕರು ಇರಾನ್ ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಇರಾನ್ನಲ್ಲಿನ ಭಾರತೀಯ ನಾಗರಿಕರು ಅನಗತ್ಯ ಪ್ರಯಾಣ ತಪ್ಪಿಸಲು, ಗಲಭೆ, ಪ್ರತಿಭಟನೆಗಳಿಂದ ದೂರವಿರಲು ಸೂಚಿಸಲಾಗಿದೆ.
ಇರಾನ್ನಲ್ಲಿ ನೆಲೆಸಿರುವ ಭಾರತೀಯ ನಾಗರಿಕರು ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿರಲು ಸಲಹೆ ನೀಡಲಾಗಿದೆ. ರಾಯಭಾರ ಕಚೇರಿ ವೆಬ್ಸೈಟ್ನಲ್ಲಿ ನೋಂದಣಿ ಮಾಡದ ಭಾರತೀಯರು ತಕ್ಷಣವೇ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಅರಾಜಕತೆ, ಯುದ್ಧ ಭೀತಿಗಳಿಂದ ನಲುಗುತ್ತಿರುವ ಆ ದೇಶದಲ್ಲಿರುವ ಭಾರತೀಯರ ಸುರಕ್ಷತೆಗಾಗಿ ಈ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ತುರ್ತು ಪರಿಸ್ಥಿತಿ ಎದುರಾಗುತ್ತಿರುವ ಕಾರಣ ಭಾರತೀಯರು ಪ್ರಯಾಣದ ದಾಖಲೆ ಪತ್ರಗಳಾದ ಇಮಿಗ್ರೇಶನ್ ದಾಖಲೆ, ಪಾಸ್ಪೋರ್ಟ್, ಗುರುತಿನ ಚೀಟಿ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ಸಿದ್ಞದಪಡಿಸಿಟ್ಟುಕೊಳ್ಳುವಂತೆ ಸೂಚಿಸಿದೆ. ಯಾವುದೇ ಸಂದರ್ಭದಲ್ಲಿ ನೆರವು ಅಥವಾ ಮಾಹಿತಿ ಬೇಕಿದ್ದಲ್ಲಿ ಸಂಪರ್ಕಿಸಲು ಇರಾನ್ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಕೋರಿದೆ.


