Menu

ಭೂ ಪರಿಹಾರಕ್ಕೆ ಕಚೇರಿಗಳಿಗೆ ಅಲೆದು ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

2.5 ಎಕರೆ ಭೂಮಿ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದು, ಲಂಚದ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯ ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ರೈತ ಮಂಜೇಗೌಡ ಮೃತಪಟ್ಟಿದ್ದಾರೆ.

ಸರ್ಕಾರ ವಶಪಡಿಸಿಕೊಂಡ ಭೂಮಿಗೆ ಪರ್ಯಾಯ ಜಾಗಕ್ಕಾಗಿ ಅವರು ಮನವಿ ಸಲ್ಲಿಸಿದ್ದರು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಲಂಚ ಬೇಡಿಕೆಯಿಂದ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮ ಕುಟುಂಬಕ್ಕೆ ಸೇರಿದ ಜಮೀನನ್ನು ಸರ್ಕಾರ ತೆಗೆದುಕೊಂಡು ಪರಿಹಾರ ಕೊಡಲಿಲ್ಲ. ಬದಲಿಗೆ ಗೋಮಾಳ ಜಾಗ ಬೇಕೆಂದಾಗ ಅರ್ಜಿ ಹಾಕಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಈ ಅನ್ಯಾಯದಿಂದ ಬೇಸತ್ತ ತಂದೆ ಪ್ರಾಣ ಕಳೆದುಕೊಂಡಿದ್ದಾರೆಂದು ಅವರ ಪುತ್ರ ಆರೋಪಿಸಿದ್ದಾರೆ.

ಮಂಜೇಗೌಡ ಡಿಸಿ ಕಚೇರಿ ಎದುರಿನ ಪಾರ್ಕ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರು ತಕ್ಷಣ ಬೆಂಕಿ ನಂದಿಸಿ ಅಂಬುಲೆನ್ಸ್ ಮೂಲಕ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜೇಗೌಡ ಮೃತಪಟ್ಟಿದ್ದಾರೆ.

1970ರ ದಶಕದಲ್ಲಿ ಮಂಜೇಗೌಡ ಅವರ ತಾತನಿಗೆ ಸೇರಿದ 2.5 ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಪರಿಹಾರದ ಬದಲಾಗಿ ಗೋಮಾಳ ಜಾಗ ನೀಡಬೇಕೆಂದು ಮಂಜೇಗೌಡ ಹಲವು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಮಲ್ಲೇಹಳ್ಳಿ ಬಳಿ ಇರುವ 2.5 ಎಕರೆ ಗೋಮಾಳ ಜಾಗವನ್ನು 20 ವರ್ಷಗಳಿಂದ ಅಧಿಕೃತವಾಗಿ ಮಂಜೂರು ಮಾಡುವಂತೆ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಅಧಿಕಾರಿಗಳು ದಾಖಲೆ ಪರಿಶೀಲನೆ ಹಾಗೂ ಪ್ರಕ್ರಿಯೆ ಹೆಸರಿನಲ್ಲಿ ಓಡಾಡಿಸುವುದರ ಜೊತೆಗೆ ಲಂಚ ಕೇಳಿದ್ದರು. ಬ್ಯಾಂಕ್ ಸೇರಿದಂತೆ ಹಲವೆಡೆ 7-8 ಲಕ್ಷ ರೂಪಾಯಿ ಸಾಲ ಮಾಡಿದ್ದ ಮಂಜೇಗೌಡ, ಪರಿಹಾರವೂ ಸಿಗದೆ ಭೂಮಿಯೂ ಮಂಜೂರಾಗದೆ ಹತಾಶರಾಗಿದ್ದರು.

Related Posts

Leave a Reply

Your email address will not be published. Required fields are marked *