ಮಾಟ ದೋಷಗಳನ್ನು ಪರಿಹರಿಸುವುದಾಗಿ ನಂಬಿಸಿದ ನಕಲಿ ಸ್ವಾಮೀಜಿಗಳಿಬ್ಬರು ಮಹಿಳೆಯ 48 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ.
ದೇವಸ್ಥಾನದ ಅನ್ನದಾನಕ್ಕೆ ಸಹಾಯ ಕೇಳಿಕೊಂಡು ಮಲ್ಲೇಶ್ವರಂನ ಈಸ್ಟ್ ಪಾರ್ಕ್ ರಸ್ತೆಯ ನಿವಾಸಿಯೊಬ್ಬರ ಮನೆಗೆ ಬಂದಿದ್ದ ಇಬ್ಬರು ನಕಲಿ ಸ್ವಾಮಿಗಳಿಗೆ ಮಹಿಳೆ 40 ರೂಪಾಯಿನೀಡಿದ್ದರು.
ಇದೇ ಸಂದರ್ಭ ಬಳಸಿಕೊಂಡು ಮಾಟ-ಮಂತ್ರದ ದೋಷ ಪರಿಹಾರವೆಂದು ನಂಬಿಸಿ ಮಹಿಳೆಯ 48 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ನಿಮ್ಮ ಗಂಡನಿಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ, ಇಬ್ಬರು ಮಹಿಳೆಯರಿಂದ ನಿಮ್ಮ ಕುಟುಂಬಕ್ಕೆ ತೊಂದರೆಯಿದೆ ಎಂದು ಸುಳ್ಳು ಕಥೆ ಕಟ್ಟಿ ಮಹಿಳೆಯನ್ನು ಭಯಗೊಳಿಸಿದ್ದ ನಕಲಿ ಸ್ವಾಮೀಜಿಗಳು, ಸಮಸ್ಯೆ ತಾವೇ ಪರಿಹಾರ ಮಾಡುವುದಾಗಿ ನಂಬಿಸಿ ಮನೆಯಲ್ಲಿರುವ ಎಲ್ಲಾ ಚಿನ್ನಾಭರಣಗಳನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಮಹಿಳೆ ತಂದ 48 ಗ್ರಾಂ ಚಿನ್ನಾಭರಣಗಳನ್ನು ಪಡೆದ ವಂಚಕರು, ಗೋಧಿ ಹಿಟ್ಟನ್ನು ತರಿಸಿ ಅದರಿಂದ ಉಂಡೆ ಮಾಡಿ ಚಿನ್ನವನ್ನು ಅದರೊಳಗೆ ಇಟ್ಟಿದ್ದಾರೆ. ಚಿನ್ನ ತುಂಬಿದ ಗೋಧಿ ಹಿಟ್ಟಿನ ಪಾತ್ರೆಯನ್ನು ಮಹಿಳೆಗೆ ಕೊಟ್ಟು, 38 ದಿನ ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡುವಂತೆ ಮತ್ತು ಅಲ್ಲಿಯವರೆಗೆ ಪಾತ್ರೆಯನ್ನು ತೆಗೆಯದಂತೆ ಸಲಹೆ ನೀಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಅನುಮಾನಗೊಂಡ ಮಹಿಳೆ ಎರಡು ಗಂಟೆಗಳ ಬಳಿಕ ಪಾತ್ರೆಯನ್ನು ತೆಗೆದು ನೋಡಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಗೊತ್ತಾಗಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಮಲ್ಲೇಶ್ವರಂ ಪೊಲೀಸರು, ವಂಚಕರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.


