ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ 5 ಹುಲಿಗಳು ಒಂದೇ ಕಡೆ ಇರುವುದು ಪತ್ತೆಯಾಗಿ ಆತಂಕ ಮೂಡಿಸಿದ ಬೆನ್ನಲ್ಲೇ ಹುಲಿಗಳ ಸೆರೆಗೆ ಬಂದ ಎರಡು ಆನೆಗಳಿಗೆ ಗ್ರಾಮಸ್ಥರು ಭರ್ಜರಿ ಸ್ವಾಗತ ಕೋರಿದ್ದಾರೆ.
ಹುಲಿಗಳ ಸೆರೆಗೆ ಕಾರ್ಯಾಚರಣೆ ನಡೆಸಲು ಆಗಮಿಸಿದ ಈಶ್ವರ ಹಾಗೂ ಲಕ್ಷ್ಮಣ ಆನೆಗಳನ್ನು ಕರೆ ತರಲಾಗಿದ್ದು, ಗ್ರಾಮಸ್ಥರು ಆನೆಗಳಿಗೆ ಪೂಜೆ ಮಾಡಿ ಭರ್ಜರಿ ಸ್ವಾಗತ ನೀಡಿದರು. ಸಂಜೆ ಬಳಿಕ ಮತ್ತೊಂದು ಹಂತದ ಕೂಂಬಿಂಗ್ ನಡೆಯುವ ಸಾಧ್ಯತೆ ಇದೆ.
ಕಲ್ಲು ಕ್ವಾರಿ ಬಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿದಾಗ ಕಲ್ಲು ಕ್ವಾರಿಯೊಂದರ ಮೇಲೆ 5 ಹುಲಿಗಳು ಒಂದೇ ಕಡೆ ಮಲಗಿರುವುದು ಪತ್ತೆಯಾಗಿತ್ತು. 5 ಹುಲಿಗಳು ಒಂದೇ ಕಡೆ ಇರುವುದರಿಂದ ಹುಲಿ ಸೆರೆ ಕಾರ್ಯಾಚರಣೆ ಕಷ್ಟ ಎಂದು ಹೇಳಲಾಗಿದೆ.
ಹುಲಿಗಳ ಇರುವಿಕೆ ಪತ್ತೆಯಾದ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ಅಧಿಕಾರಿಗಳು ಕೂಂಬಿಂಗ್ ತೀವ್ರಗೊಳಿಸಿದ್ದಾರೆ.
3 ಊರುಗಳಲ್ಲಿ ನಿಷೇಧಾಜ್ಞೆಜಾರಿ
ನಂಜೇದೇವನಪುರ ಗ್ರಾಮದ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ 5 ಹುಲಿ ಓಡಾಟ ಪತ್ತೆಯಾದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿದ ಹಿನ್ನೆಲೆಯಲ್ಲಿ ಎರಡು ದಿನ ಮೂರು ಗ್ರಾಮಗಳಲ್ಲಿ ನಿಷೇಧಾಜ್ಞೆ ಹೊರಡಿಸಿ ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಆದೇಶಿಸಿದ್ದಾರೆ.
ನಂಜೆದೇವನಪುರ ಸೇರಿ ಉಡಿಗಾಲ, ವೀರನಪುರ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿ.22 ಹಾಗೂ 23ರಂದು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರೆಂದು ಕಟ್ಟೆಚ್ಚರ ವಹಿಸಲಾಗಿದ್ದು, ಯಾರೂ ಗುಂಪು ಸೇರದಂತೆ ಹಾಗೂ ಒಬ್ಬರೇ ಓಡಾಡದಂತೆ, ಕಾರ್ಯಾಚರಣೆ ವೇಳೆ ಜನರು ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ.
ಸಿಎಂಗೆ ಕರೆ ಮಾಡಿದ ಶಾಸಕರು: ಹುಲಿ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ನಂಜೇದೇವನಪುರಕ್ಕೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದರು. 5 ಹುಲಿಗಳಿರುವ ಹಿನ್ನೆಲೆಯಲ್ಲಿ ಸೆರೆ ಹಿಡಿಯುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಆನೆಗಳನ್ನು ಬಳಸಿಕೊಂಡು ಹುಲಿಗಳನ್ನು ಕಾಡಿಗೆ ಓಡಿಸುವ ಕೆಲಸ ಮಾಡುತ್ತೇವೆಂಬ ಅರಣ್ಯ ಇಲಾಖೆ ಮಾತಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಹುಲಿಗಳನ್ನು ಕಾಡಿಗೆ ಅಟ್ಟಬಾರದು, ಸೆರೆ ಹಿಡಿಯಬೇಕೆಂದು ರೈತರು ಒತ್ತಾಯಿಸಿದರು.
ರೈತರ ಸಮಸ್ಯೆ ಆಲಿಸಿದ ಶಾಸಕರು, ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ನಂಜದೇವನಪುರದಲ್ಲಿ 5 ಹುಲಿ ಪ್ರತ್ಯಕ್ಷವಾದ ಬಳಿಕ ಜನರು ತೀರಾ ಆತಂಕಕ್ಕೆ ಒಳಗಾಗಿದ್ದಾರೆ. ಹೆಚ್ಚುವರಿ ವೈದ್ಯರು ಹಾಗೂ ತಜ್ಞರನ್ನು ಕಳುಹಿಸುವಂತೆ ಮನವಿ ಮಾಡಿದರು.
ಶಾಸಕ ಪುಟ್ಟರಂಗಶೆಟ್ಟಿ ಮಾತಿಗೆ ಸಹಮತ ನೀಡಿದ ಸಿಎಂ ಸಿದ್ದರಾಮಯ್ಯ, ಈಗಲೇ ಅರಣ್ಯ ಸಚಿವರ ಜೊತೆ ಮಾತನಾಡುತ್ತೇನೆಂದು ಭರವಸೆ ನೀಡಿದ್ದಾರೆ. ಸಿಎಂ ಜೊತೆ ಮಾತನಾಡಿದ ಬಳಿಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೂ ಕರೆ ಮಾಡಿ ಶಾಸಕರು ಸಮಸ್ಯೆ ಹೇಳಿದರು. ಆದ ಸಚಿವರು, ಕೂಡಲೇ ಒಂದು ಟೀಂ ಕಳುಹಿಸಿ ಕೊಡುವುದಾಗಿ ಭರವಸೆ ನೀಡಿದರು.


