ಬೆಂಗಳೂರು ಸೇರಿದಂತೆ ರಾಜ್ಯದ 18 ಕಡೆ ಖಾಸಗಿ ಕಾಲೇಜುಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬಿಎಂಎಸ್ ಕಾಲೇಜು ಹಾಗೂ ಆಕಾಶ್ ಇಂಜಿನಿಯರಿಂಗ್ ಕಾಲೇಜ್ ಮೇಲೂ ದಾಳಿಯಾಗಿದೆ.
ಅಕ್ರಮ ಹಣ ವರ್ಗಾವಣೆ ಮತ್ತು ಇಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ವಿಚಾರವಾಗಿ ಸಾಕಷ್ಟು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಇಎ ಅಧಿಕಾರಿಗಳು ಈ ಹಿಂದೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಅದರನ್ವಯ ಕಾಲೇಜುಗಳಿಗೆ ಮಲ್ಲೇಶ್ವರಂ ಪೊಲೀಸರಿಂದ ನೋಟಿಸ್ ನೀಡಿ ಸೈಬರ್ ಅಧಿಕಾರಿಗಳು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣ ಸಂಬಂಧ ಸೈಬರ್ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಅಧಿಕಾರಿಗಳ ತನಿಖೆ ವೇಳೆ ಮಧ್ಯವರ್ತಿಗಳ ಪಾತ್ರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಿಬ್ಬಂದಿ ಭಾಗಿ ಆಗಿರುವುದು ಸಾಬೀತಾಗಿತ್ತು.
ಒಂದು ಸೀಟ್ ಗೆ ಅರವತ್ತು ಲಕ್ಷ ರೂಪಾಯಿ ಪಡೆದಿದ್ದು, ಬ್ಲಾಕ್ ಮಾಡಿದ್ದ ಸೀಟ್ ಗಳನ್ನು ಅರವತ್ತು ಲಕ್ಷಕ್ಕೆ ಮಾರಾಟ ಮಾಡಿರುವುದು ಪತ್ತೆಯಾಗಿತ್ತು.
ಮಧ್ಯವರ್ತಿಗಳು ಅಭ್ಯರ್ಥಿಗಳ ಲಾಗಿನ್ ,ಪಾಸ್ವರ್ಡ್, ಸೀಕ್ರೆಟ್ ಕೀ ಬಳಸಿ ಅಭ್ಯರ್ಥಿ ಪರ ಆಯ್ಕೆ ಮಾಡಿಸಲಾಗಿತ್ತು.. ಅಕ್ರಮ ಹಣದ ವ್ಯವಹಾರ ನಡೆದಿರುವ ಶಂಕೆಯಿಂದ ಈಗ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.