ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ , ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್, ಮತ್ತು ಹರಿಯಾಣದ ರೋಹ್ಟಕ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.4 ದಾಖಲಾಗಿದ್ದು, ಕೇಂದ್ರಬಿಂದು ಹರಿಯಾಣದ ಝಜ್ಜರ್ನಲ್ಲಿ ಇರುವುದು ಪತ್ತೆಯಾಗಿದೆ. ಭೂಮಿ ಕಂಪಿಸಿದಾಗ ಹೆದರಿದ ಜನ ಭಯಭೀತರಾಗಿ ಮನೆಗಳು, ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.
ಬೆಳಗ್ಗೆ 9:04ಕ್ಕೆ ಭೂಕಂಪ ಸಂಭವಿಸಿದ್ದು, 10 ಸೆಕೆಂಡ್ ಕಂಪನವಾಗಿದೆ. ದೆಹಲಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ಹರಿಯಾಣದ ರೋಹ್ಟಕ್ ಸಮೀಪದಲ್ಲಿ ಕೇಂದ್ರಬಿಂದು ದಾಖಲಾಗಿದೆ. ಕಂಪನಕ್ಕೆ ಕಟ್ಟಡಗಳು ನಡುಗಿವೆ. ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ಮಾಹಿತಿ ಇನ್ನೂ ದೃಢಪಟ್ಟಿಲ್ಲ. ಈ ಘಟನೆಯಿಂದ ಜನರು ಆತಂಕಗೊಂಡಿದ್ದಾರೆ.
ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ ಮಾಹಿತಿಯನ್ನು ದಾಖಲಿಸಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಸ್ಥಳೀಯ ಆಡಳಿತವು ಸನ್ನದ್ಧವಾಗಿದ್ದು, ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧವಿರುವುದಾಗಿ ತಿಳಿಸಿದೆ.