ಬೆಂಗಳೂರು: ನಕಲಿ ದಾಖಲೆಗಳನ್ನು ಸಲ್ಲಿಸಿ ಚಾಲಕನ ಹುದ್ದೆ ಪಡೆದು 17 ವರ್ಷಗಳ ಸೇವೆ ಸಲ್ಲಿಸಿದ ಬಳಿಕ ವಜಾಗೊಂಡ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕಳೆದ 1988ರಲ್ಲಿ ನಕಲಿ ದಾಖಲೆ ಸಲ್ಲಿಸಿ ಬದಲಿ ಚಾಲಕ ಹುದ್ದೆಗೆ ಸೇರ್ಪಡೆಗೊಂಡಿದ್ದ ದೊಡ್ಡಗುಬ್ಬಿ ಬಳಿಯ ಯಾರಪ್ಪನಹಳ್ಳಿಯ ಮಾಲೂರಪ್ಪನನ್ನು ವಜಾಗೊಳಿಸಿದ್ದ ಬಿಎಂಟಿಸಿ ಕ್ರಮದಲ್ಲಿ ಯಾವುದೇ ದೋಷವಿಲ್ಲ ಎಂಬುದಾಗಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ ಎತ್ತಿಹಿಡಿದು ಆದೇಶ ನೀಡಿದೆ.
ಅಲ್ಲದೆ, ಮಾಲೂರಪ್ಪ ಬದಲಿ ಚಾಲಕನ ಹುದ್ದೆಗೆ ಅನರ್ಹರಾಗಿದ್ದೂ, ನಕಲಿ ದಾಖಲೆ ಸಲ್ಲಿಸಿ ಆ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಈ ಅಂಶವನ್ನು ಪರಿಗಣಿಸಿ ಅವರನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಅತಿಯಾದ ಕಠಿಣ ಕ್ರಮ ಎನ್ನಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಕನಿಷ್ಠ ನಾಲ್ಕನೇ ತರಗತಿ :
1990ರಲ್ಲಿ ಬದಲಿ ಚಾಲಕನ ಹುದ್ದೆಗೆ ಕನಿಷ್ಠ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ ಕೇವಲ 1ನೇ ತರಗತಿಯವರೆಗೂ ಮಾತ್ರ ಅಧ್ಯಯನ ಮಾಡಿದ್ದ ಮಾಲೂರಪ್ಪ, ತಾನು 9ನೇ ತರಗತಿ ಅಧ್ಯಯನ ಮಾಡಿರುವುದಾಗಿ ನಕಲಿ ಶಾಲಾ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಸಲ್ಲಿಸಿದ್ದರು. ಈ ಆರೋಪ ಸಂಬಂಧ ಬಿಎಂಟಿಸಿ ಅವರ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಿತ್ತು.
ಒಂದು ದಶಕ ವಿಚಾರಣೆ :
ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದ ಬಿಎಂಟಿಸಿ 2002ರಲ್ಲಿ ಪೂರ್ಣಗೊಳಿಸಿ, 2005ರಲ್ಲಿ ಮಾಲೂರಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
11 ವರ್ಷಗಳ ಕಾಲ ಬಳಿಕ ಅಂದರೆ 2016ರಲ್ಲಿ ಕಾರ್ಮಿಕ ನ್ಯಾಯಾಲಯ ಅರ್ಜಿದಾರರ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ, ಅವರನ್ನು ಸೇವೆಯಿಂದ ವಜಾಗೊಳಿಸುವುದು ಅತ್ಯಂತ ಕಠಿಣ ಕ್ರಮ. ಹೀಗಾಗಿ, ಯಾವುದೇ ಹಿಂಬಾಕಿ ಪಾವತಿ ಮಾಡದೆ, ಮೂರು ವರ್ಷಗಳ ಕಾಲ ವೇತನ ಹೆಚ್ಚಳ ಮಾಡದೆ, ಸೇವೆಯಲ್ಲಿ ಮುಂದುವರೆಸುವುದಕ್ಕೆ ನಿರ್ದೇಶನ ನೀಡಿತ್ತು.
ಕಾರ್ಮಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿಎಂಟಿಸಿ 2017ರಲ್ಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಕಾರ್ಮಿಕ ನ್ಯಾಯಾಲಯದ ಆದೇಶ ರದ್ದುಪಡಿಸಿ, ಮಾಲೂರಪ್ಪ ಅವರನ್ನು ವಜಾಗೊಳಿಸಿದ್ದ ಬಿಎಂಟಿಸಿ ಕ್ರಮವನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಾಲೂರಪ್ಪ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಇದೀಗ ಅಂದರೆ, 2025ರ ಜುಲೈ 25ರಂದು ಬಿಎಂಟಿಸಿ ಕ್ರಮ ಎತ್ತಿ ಹಿಡಿದು ಆದೇಶಿಸಿದೆ.