ಹಾವೇರಿ: ವರದಾ ಬೇಡ್ತಿ ನದಿ ಜೋಡಣೆಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ಹೊರವಲಯದಲ್ಲಿರುವ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬುಧವಾರ ರೈತರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಅವರ ಅಹವಾಲುಗಳನ್ನು ಆಲಿಸಿ ನಂತರ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೊಡನೆ ನದಿ ಜೋಡಣೆ ವಿಚಾರವಾಗಿ ಚರ್ಚೆ ಮಾಡಿದ್ದು, ಡಿಪಿಆರ್ ರಚನೆಗೆ ಸರ್ಕಾರ ಸೂಚನೆ ನೀಡಿದೆ ಎಂದು ಹೇಳಿದರು.
ರೈತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ನಬಾರ್ಡ್ ನೀಡುತ್ತಿದ್ದ ನೆರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದಿಂದ ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಿದೆ. ಆರ್ಥಿಕವಾಗಿ ಸಧೃಡವಾಗಿರುವ ಡಿಸಿಸಿ ಬ್ಯಾಂಕಗಳು ಸಾಲ ವಿತರಣೆ ಮಾಡುತ್ತಿವೆ. ಆದರೆ ನಷ್ಟದಲ್ಲಿರುವ ಡಿಸಿಸಿ ಬ್ಯಾಂಕುಗಳಿಗೆ ಕೃಷಿ ಸಾಲ ವಿತರಣೆ ಸಮಸ್ಯೆಯಾಗಿದೆ.
ನಬಾರ್ಡ್ ನೆರವು ಕಡಿತ ಮಾಡಿದಾಗ ಕೇಂದ್ರ ವಿತ್ತ ಸಚಿವರೊಂದಿಗೆ ಮಾತನಾಡಿ ಎಂದು ನಾನೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ನಬಾರ್ಡ್ ನೆರವು ಕಡಿತವನ್ನು ಪ್ರಶ್ನೆ ಮಾಡಿದ ಏಕೈಕ ರಾಜ್ಯ ಕರ್ನಾಟಕ. ಇತರ ಯಾವ ರಾಜ್ಯ ಸರ್ಕಾರಗಳೂ ನಬಾರ್ಡ್ ನೆರವು ಕಡಿತವನ್ನು ಪ್ರಶ್ನೆ ಮಾಡಲಿಲ್ಲ ಎಂದು ಹೇಳಿದರು.
ನಬಾರ್ಡ್ ನೆರವು ವರ್ಷಕ್ಕೆ 8 ಸಾವಿರ ಕೋಟಿ ರೂ. ಕಡಿಮೆಯಾಗಿದ್ದು, ಯಾವ ಕಾರಣಕ್ಕೆ ಕೃಷಿ ಸಾಲ ಸಮಸ್ಯೆಯಾಗಯತ್ತಿದೆ ಎಂಬುದನ್ನು ರೈತರು ಇದನ್ನು ಅಂದಾಜು ಮಾಡಬೇಕಾಗಿದೆ ಎಂದರು.
ಸಾಲ ವಿತರಣೆ ವೇಳೆ ತೀರುವಳಿ ಸಾಮರ್ಥ್ಯವನ್ನೂ ಪರಿಗಣಿಸುವುದು ಸಹಜ. ಜಿಲ್ಲೆಯ ಎಲ್ಲ ರೈತರಿಗೂ ಕೃಷಿ ಸಾಲ ಲಭ್ಯವಾಗುವಂತೆ ಪ್ರಯತ್ನಿಸುತ್ತೇನೆ. ನಬಾರ್ಡ್ ಈ ಮೊದಲು ಪ್ರತಿಶತ 40ರಷ್ಟು ನೆರವು ನೀಡುತ್ತಿದ್ದು, ಈ ಪ್ರಮಾಣವನ್ನು ಪ್ರತಿಶತ 10ಕ್ಕೆ ಇಳಿಸಿದೆ. ಇದು ಕೃಷಿ ಸಾಲ ವಿತರಣೆಗೆ ಸಮಸ್ಯೆಯಾಗಿದ್ದು, ಕೃಷಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ನೀಡಿದೆ ಎಂದರು.
ಬೆಳೆ ಅಡಮಾನ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕ್, ಫ್ಯಾಕ್ಸ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ದರ ಕಡಿಮೆ ಇದ್ದಾಗ ಕೃಷಿ ಉತ್ಪನ್ನ ಮಾರಾಟ ಮಾಡುವ ಬದಲಿಗೆ ಬೆಳೆ ಅಡಮಾನ ಸಾಲ ಪಡೆಯಬಹುದು. ಈ ಸೌಲಭ್ಯ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು.
ಬೆಂಬಲ ಬೆಲೆ ಯೋಜನೆಯಲ್ಲಿ ಇದುವರೆಗೆ ಹೊಸಪೇಟೆ, ಬಳ್ಳಾರಿ ಸೇರಿದಂತೆ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಲ್ಲೆ ಅಧಿಕ ಪ್ರಮಾಣದಲ್ಲಿ ಜೋಳ ಖರೀದಿಯಾಗುತ್ತಿತ್ತು. ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಜೋಳ ಬೆಳೆದರೂ ಈ ಜಿಲ್ಲೆಗಳಲ್ಲಿ ಖರೀದಿ ಆಗುತ್ತಿರಲಿಲ್ಲ. ಹೀಗಾಗಿ ಈ ಬಾರಿ ಬೆಂಬಲ ಬೆಲೆ ಯೋಜನೆಯ ಖರೀದಿಯ ಒಟ್ಟು ಪ್ರಮಾಣವನ್ನು ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಿ ನ್ಯಾಯ ಒದಗಿಸಲಾಗಿದೆ. ಜಿಲ್ಲೆಯ ಜೋಳ ಬೆಳೆಯುವ ರೈತರು ಈ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಿದ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೃಷಿ ಸಾಲ ವಿತರಣೆಗೆ ಡಿಸಿಸಿ ಬ್ಯಾಂಕುಗಳು ಸಿಬಿಲ್ ಸ್ಕೋರ್ ಪರಿಗಣಿಸುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಮಾತ್ರ ಸಿಬಿಲ್ ಸ್ಕೋರ್ ಆಧರಿಸಿ ಕೃಷಿ ಸಾಲ ನೀಡುತ್ತಿವೆ. ಈ ಬಗ್ಗೆ ಲೋಕಸಭಾ ಸದಸ್ಯರೊಂದಿಗೆ ಚರ್ಚೆ ಮಾಡುತ್ತೇನೆ. ರೈತ ಮುಖಂಡರೂ ಕೂಡ ಈ ಬಗ್ಗೆ ಸಂಸದರ ಮೇಲೆ ಒತ್ತಡ ತರಬೇಕು ಎಂದರು.
ಬೆಳೆ ಹಾನಿ, ಸಾಲ ವಿತರಣೆ ಸೇರಿದಂತೆ ಇದುವರೆಗೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳನ್ನು ವಿವರಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಅವರು, ರೈತರ ಆತ್ಮಹತ್ಯೆಯ ಹಳೆಯ ಪ್ರಕರಣಗಳಲ್ಲಿ ಪರಿಹಾರ ವಿತರಣೆಗೆ ಆರ್ಥಿಕ ಇಲಾಖೆ ವಿವರಣೆ ಕೇಳಿದ್ದು, ಶೀಘ್ರದಲ್ಲಿ ಸಲ್ಲಿಸಲಾಗುವುದು ಎಂದು ಹೇಳಿದರು.
ಬೆಳೆ ವಿಮೆ ವಿತರಣೆಯಲ್ಲಿ ರಾಜ್ಯದಲ್ಲೇ ಹಾವೇರಿ ಜಿಲ್ಲೆ ಅತ್ಯತ್ತಮ ಸಾಧನೆ ಮಾಡಿದ್ದು, ಈ ಕಾರಣಕ್ಕೆ ಜಿಲ್ಲೆಗೆ ಪ್ರಶಸ್ತಿ ಲಭಿಸಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ವರ್ಷ ಬೆಳೆ ವಿಮೆ, ಸಾಮಾಜಿಕ ಭದ್ರತಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಒಟ್ಟು 2500 ಕೋಟಿ ರೂ. ವಿತರಣೆ ಮಾಡಲಾಗಿದೆ. ಡಿಸಿಸಿ ಬ್ಯಾಂಕ್ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಮುರುಗೇಶ್ ಅವರು ಕೃಷಿ ಸಾಲ ವಿತರಣೆಯಲ್ಲಿ ಪತಿಶತ 101ರಷ್ಟು ಸಾಧನೆ ಮಾಡಲಾಗಿದೆ. 3506 ಕೋಟಿ ರೂ. ಕೃಷಿ ಸಾಲ ವಿತರಣೆ ಗುರಿ ಹೊಂದಿದ್ದು, 3805 ಕೋಟಿ ರೂ. ವಿತರಿಸಲಾಗಿದೆ ಎಂದು ಹೇಳಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಅವರು ನದಿ ಜೋಡಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ಅಧ್ಯಕ್ಷ ರಾಮಣ್ಣ ಕೆಂಚೆಳ್ಳೇರ, ಎಸ್ಪಿ ಯಶೋಧ ವಂಟಿಗೋಡಿ, ಅಪರ ಜಿಲ್ಲಾಧಿಕಾರಿ ವೇದಿಕೆಯಲ್ಲಿದ್ದರು.