Saturday, September 13, 2025
Menu

ವರದಕ್ಷಿಣೆ ಕಿರುಕುಳ ದೂರು: ಎಸ್‌. ನಾರಾಯಣ್‌ ಕುಟುಂಬಕ್ಕೆ ಪೊಲೀಸ್‌ ನೋಟಿಸ್‌

ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಡಿ ಸೊಸೆ ಪ್ರಕರಣ ದಾಖಲಿಸಿರುವ ಹಿನ್ನೆಲೆ ಸಿನಿಮಾ ನಿರ್ದೇಶಕ ಎಸ್.ನಾರಾಯಣ್, ಪತ್ನಿ ಹಾಗೂ ಪುತ್ರನ ವಿರುದ್ಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಎಸ್.ನಾರಾಯಣ್ ಅವರ ಎರಡನೇ ಮಗನ ಪತ್ನಿ ಪವಿತ್ರಾ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೂರು ದಿನದೊಳಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ

2021ರಲ್ಲಿ ಎಸ್‌. ನಾರಾಯಣ್ ಪುತ್ರ ಪವನ್ ಮತ್ತು ಪವಿತ್ರಾ ಅವರ ಮದುವೆ ನಡೆದಿತ್ತು. ಮದುವೆಯಲ್ಲಿ 1 ಲಕ್ಷ ರೂ. ಮೌಲ್ಯದ ಉಂಗುರ ನೀಡಿದ್ದು, ಪವಿತ್ರಾ ಕುಟುಂಬ ಮದುವೆ ಖರ್ಚು ಮಾಡಿತ್ತು ಎನ್ನಲಾಗಿದೆ.

ಆ ಸಮಯದಲ್ಲಿ ಕೆಲಸ ಇಲ್ಲದೆ ಪವನ್ ಮನೆಯಲ್ಲೇ ಇದ್ದ. ತಾನೇ ಕೆಲಸ ಮಾಡಿ ಪವನ್‌ ಪತ್ನಿ ಪವಿತ್ರಾ ಮನೆ ನೋಡಿಕೊಳ್ಳುತ್ತಿದ್ದರು.ಲಾ ಸಾಮ್ರಾಟ್ ಟೀಂ ಅಕಾಡಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಲು ಪವನ್‌ ಪವಿತ್ರಾ ಬಳಿ ಹಣ ಕೇಳಿದ್ದು, ಪವಿತ್ರಾ ತಮ್ಮ ತಾಯಿಯ ಒಡವೆಯನ್ನು ಪವನ್‌ಗೆ ಕೊಟ್ಟಿದ್ದರು. ನಷ್ಟ ಆಗಿ ಕಲಾ ಸಾಮ್ರಾಟ್ ಟೀಂ ಅಕಾಡಮಿ ಮುಚ್ಚಲಾಗಿತ್ತು.

ನಂತರ 10 ಲಕ್ಷ ರೂಪಾಯಿ ಸಾಲ ಮಾಡಿ ಪಲ್ಲವಿ ಪತಿಗೆ ನೀಡಿದ್ದರು. ಎಸ್.ನಾರಾಯಣ್, ಪತ್ನಿ, ಪುತ್ರ ಹಲ್ಲೆ ನಡೆಸಿ ಹಣಕ್ಕೆ ಒತ್ತಾಯಿಸಿ ಜಗಳವಾಡಿ ಪವಿತ್ರಾ ಅವರನ್ನು ಮನೆಯಿಂದ ಹೊರಹಾಕಿದ್ದರು. ಹೀಗೆಂದು ನಾರಾಯಣ್, ಪತ್ನಿ ಭಾಗ್ಯಲಕ್ಷ್ಮಿ, ಪತಿ ಪವನ್ ವಿರುದ್ಧ ಪವಿತ್ರಾ ದೂರು ದಾಖಲಿಸಿದ್ದಾರೆ. ನನಗೆ, ನನ್ನ ಮಗನಿಗೆ ತೊಂದರೆಯಾದರೆ ಇವರುಗಳೇ ಕಾರಣ ಎಂದೂ ಪವಿತ್ರಾ ಎಫ್​ಐಆರ್​ನಲ್ಲಿ ಉಲ್ಲೇಖ ಮಾಡಿದ್ದಾರೆ.

ಎಸ್ ನಾರಾಯಣ್ ಈ ಆರೋಪ ನಿರಾಕರಿಸಿದ್ದು, ಪವಿತ್ರಾ ಮನೆ ಬಿಟ್ಟು ಹೋಗಿ 14 ತಿಂಗಳಾಗಿವೆ. ವರದಕ್ಷಿಣೆ ಪಿಡುಗು ತೊಲಗಬೇಕು ಎಂದು ಸಿನಿಮಾ ಮಾಡಿದವನು ನಾನು, ಆದರೆ ಈಗ ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ವರದಕ್ಷಿಣೆ ಕೇಸು ಎನ್ನುವುದನ್ನು ಕೆಲವು ಮಹಿಳೆಯರು ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದಿದ್ದಾರೆ.

ನಮ್ಮ ತಂದೆ 60ರ ದಶಕದಲ್ಲಿ ವರದಕ್ಷಿಣೆ ವಿರುದ್ಧ ಚಳವಳಿ ಮಾಡಿದವರು. ನಾನು ಅಥವಾ ನಮ್ಮ ಮನೆತನದಲ್ಲಿ ಯಾರೂ ಸಹ ವರದಕ್ಷಿಣೆಯ ಪರವಾಗಿ ಇರುವವರಲ್ಲ. ಪವನ್ ಹಾಗೂ ಪವಿತ್ರಾ ಪ್ರೀತಿಸಿ ಮದುವೆ ಆದರು. ನಾವು ವಿರೋಧ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಪ್ರಕರಣ ಈಗ ಕೋರ್ಟ್​​ನಲ್ಲಿದೆ. ಹಾಗಾಗಿ ಆ ಯುವತಿಯ ಬಗ್ಗೆ ನಾನು ಹೆಚ್ಚು ಮಾತನಾಡುವಂತಿಲ್ಲ. ನಾವೂ ಸಹ ಕೋರ್ಟ್​​ಗೆ ಹೋಗುತ್ತೇವೆ, ಅಲ್ಲಿ ಗೆಲ್ಲುವ ವಿಶ್ವಾಸ ನನಗೆ ಇದೆ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *