Menu

ಮಳೆಗಾಲದಲ್ಲಿ ಮಿಸ್‌ ಮಾಡದೆ ಆಹಾರದಲ್ಲಿ ಒಮ್ಮೆಯಾದರೂ ಕೆಸು ಬಳಸಿ

ಆರೋಗ್ಯಕರ ಕಳೆ ಗಿಡಗಳಲ್ಲಿ ಮಳೆಗಾಲದಲ್ಲಿ ತಾನಾಗಿಯೇ ಬೆಳೆಯುವ ಕೆಸು ಕೂಡ ಒಂದು. ಕರಾವಳಿ ಮತ್ತು ಮಲೆನಾಡುಗಳ ಆಹಾರದಲ್ಲಿ ಕೆಸುವಿನ ಬಳಕೆ ಸ್ವಲ್ಪ ಹೆಚ್ಚು. ಈ ಕೆಸುವಿನಿಂದ ಪತ್ರೊಡೆ ಮಾಡುವುದು ಹೆಚ್ಚು ಮಂದಿಗೆ ಗೊತ್ತು. ಅದೇ ರೀತಿ ಕೆಸು ದಂಟಿನಿಂದ ರುಚಿಕರ ಸಾಂಬಾರ್‌ ಕೂಡ ಮಾಡಬಹುದು.

ಕೆಸು ಎಲೆಗಳನ್ನು ಬೇಯಿಸಿ ಚಟ್ನಿ ಮಾಡಿದರೂ ರುಚಿಕರವಾಗಿರುತ್ತದೆ. ಬಿಸಿಲು ಬೀಳುವ ಜಾಗದಲ್ಲಿ ಬೆಳೆದ ಕೆಸುವನ್ನೇ ಬಳಸಬೇಕು. ಕೆಸು ತುರಿಕೆಗೆ ಕಾರಣವಾಗುವುದರಿಂದ ಇದನ್ನು ಅಡುಗೆಯಲ್ಲಿ ಹೇಗೆ ಬಳಸುವುದಿದ್ದರೂ ಬೇಯಿಸಿರಬೇಕು ಮತ್ತು ಹುಳಿ ಜಾಸ್ತಿ ಸೇರಿಸಬೇಕು.

ಕೆಸು ದಂಟು ಆಗಲಿ, ಎಲೆಯಾಗಲಿ ಆಹಾರದಲ್ಲಿ ಹೊಟ್ಟೆಗೆ ಸೇರಿದರೆ ಹೊಟ್ಟೆ ಸೇರಿದಂತೆ ದೇಹದಲ್ಲಿರುವ ನಂಜುಕಾರಕಗಳನ್ನು ಹೊರ ಹಾಕುತ್ತದೆ. ವಿಟಮಿನ್‌ ಎ, ವಿಟಮಿನ್‌ ಸಿ ಹೇರಳವಾಗಿರುವ ಕೆಸುವಿನ ಎಲೆಯ ಸೇವನೆ ಕಣ್ಣಿನ ಆರೋಗ್ಯಕ್ಕೆ ಉತ್ತಮ. ಅದರಲ್ಲಿರುವ ಬೀಟಾ-ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ. ಇದು ಕಣ್ಣಿನ ಗ್ಲುಕೋಮಾ ಸಮಸ್ಯೆಗಳನ್ನು ದೂರವಿಡುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಇದು ಉತ್ತಮ ಆಹಾರ. ನಾರಿನ ಅಂಶವೂ ಸಮೃದ್ಧವಾಗಿರುವುದರಿಂದ ಜೀರ್ಣಶಕ್ತಿಯನ್ನು ಉತ್ತಮ ಗೊಳಿಸಲು ಸಹಕಾರಿ. ಕೆಸುವಿನ ಎಲೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ವರ್ಷದಲ್ಲೊಮ್ಮೆಯಾದರೂ ಕೆಸುವನ್ನು ಆಹಾರದಲ್ಲಿ ಬಳಸುವುದು ಅಗತ್ಯ ಮತ್ತು ಉತ್ತಮ. ನಂಜು ನಿವಾರಕ ಎಂಬ ಕಾರಣಕ್ಕೆ ಕರಾವಳಿಯಲ್ಲಿ ಹಲವರಲ್ಲಿ ಹೆರಿಗೆಯಾದ ಮೂರನೇ ದಿನ ಬಾಣಂತಿಗೆ ಕೆಸು ದಂಟಿನ ಪಲ್ಯ ತಿನ್ನಲು ಕೊಡುವ ರೂಢಿಯೂ ಇದೆ.

ಕೆಲವು ತಳಿಯ ಕೆಸುವನ್ನು ನೆಟ್ಟು ಬೆಳೆಸುವುದೂ ಇದೆ. ಮಳೆಗಾಲದಲ್ಲಿ ಕಳೆಗಿಡವೆಂಬಂತೆ ಬೆಳೆಯುವ ಕಪ್ಪು ಮಿಶ್ರಿತ ನೇರಳೆ ಕೆಸು ದಂಟು ಸಾಂಬಾರ್‌ಗೆ ಹೊಂದಿಕೊಂಡರೆ, ತಂತಾನೆ ಬೆಳೆಯುವ ಬಿಳಿದಂಟಿನ ಕೆಸು ಹೆಚ್ಚಾಗಿ ಪತ್ರೊಡೆಗೆ ಬಳಕೆಯಾಗುತ್ತದೆ.

ನೆಟ್ಟು ಬೆಳೆಸುವ ಕೆಸುವಿನಿಂದ ಕೂಡ ಪತ್ರೊಡೆ ಮಾಡುತ್ತಾರೆ, ನೆಟ್ಟು ಬೆಳೆಸುವ ಕೆಸುವಿನ ಗಡ್ಡೆಗಳ ಸಾಂಬಾರ್‌ ಕೂಡ ರುಚಿಕರವಾಗಿರುತ್ತದೆ. ತಂತಾನೆ ಬೆಳೆಯುವ ಬಿಳಿದಂಟಿನ ಕೆಸು ಎಲೆಯನ್ನು ಎರಡು ಮೂರುದಿನ ಕಟ್ಟಿಟ್ಟು ಬಾಡಿಸಿ ಹೆಸರುಕಾಳು ಸಾಂಬಾರಿಗೂ ಬಳಸುತ್ತಾರೆ. ಹೀಗಾಗಿ ವರ್ಷದಲ್ಲಿ ಒಮ್ಮೆ ಯಾದರೂ ಕೆಸು ಎಲೆಯನ್ನು ಪತ್ರೊಡೆ ಮತ್ತು ಕೆಸು ದಂಟನ್ನು ಸಾಂಬಾರ್‌ ರೂಪದಲ್ಲಿ ಮಿಸ್‌ ಮಾಡದೆ ತಿಂದು ದೇಹದಲ್ಲಿರುವ ಟಾಕ್ಸಿನ್ಸ್‌ಗಳನ್ನು ಖರ್ಚಿಲ್ಲದೆ ಹೊರ ಹಾಕಿ ಆರೋಗ್ಯ ವೃದ್ಧಿಸಿಕೊಳ್ಳಿ

Related Posts

Leave a Reply

Your email address will not be published. Required fields are marked *