ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರನ್ನು ತೃಪ್ತಿ ಪಡಿಸಲು ಹೋಗಿ ಧರ್ಮ ಧರ್ಮಗಳ ನಡುವೆ ವಿಭಜನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೂಗಳು- ಮುಸಲ್ಮಾನರನ್ನು ಒಡೆಯುವ ಕೆಲಸಕ್ಕೆ ಇವರು ಕೈ ಹಾಕಿದ್ದಾರೆ. ಮದರಸಾಕ್ಕೆ ಹಣ ಕೊಟ್ಟಿದ್ದಾರೆ. ಮೌಲ್ವಿಗಳ ಹಣ ಹೆಚ್ಚಿಸಿದ್ದಾರೆ. ಮದುವೆಗೆ 50 ಸಾವಿರ ನೀಡಿದ್ದಾರೆ. ಹಾಗಿದ್ದರೆ ಹಿಂದೂಗಳಲ್ಲಿ ಬಡವರಿಲ್ಲವೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳಿಗೆ ಯಾಕೆ ಈ ದುರ್ಬುದ್ಧಿ ಎಂದು ಪ್ರತಿಯೊಬ್ಬರೂ ಈ ರಾಜ್ಯದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಬಜೆಟ್ಟನ್ನು ಸಿದ್ದರಾಮಯ್ಯನವರು ಮಂಡಿಸಿಲ್ಲ; ಜಮೀರ್ ಅಹ್ಮದ್ ಖಾನ್ ಅವರೇ ಮಂಡಿಸಿದರೇ ಎಂಬ ಅನುಮಾನ ನನಗಿದೆ ಎಂದು ಆಕ್ಷೇಪಿಸಿದರು. ಸಿದ್ದರಾಮಯ್ಯನವರು ಕೊನೆಯ ಬಜೆಟ್ ಮಂಡಿಸಿದ್ದಾರೆ; ಇದು ತೀರಾ ನಿರಾಶಾದಾಯಕ ಎಂದು ಹೇಳಿದರು.
ಈ ಬಜೆಟ್ನಿಂದ ರಾಜ್ಯದ ಕೃಷಿಕರು, ಕೃಷಿ ಕ್ಷೇತ್ರ, ಯುವಕರು, ಮಹಿಳೆಯರು, ಬಡವರಿಗೆ ಯಾವುದೇ ಅನುಕೂಲ ಆಗಲಾರದು. ಇದು ಅಭಿವೃದ್ಧಿಗೆ ಪೂರಕವಲ್ಲ ಎಂದರು. ಸಿದ್ದರಾಮಯ್ಯನªರಿಗೆ ಅಲ್ಪಸಂಖ್ಯಾತರ ಬಗೆಗಿನ ಪ್ರೀತಿ, ಕಾಳಜಿ ಎಲ್ಲರಿಗೂ ಗೊತ್ತಿದೆ. ಆದರೆ, ಹಣಕಾಸಿನ ಸಚಿವರಾಗಿ ಅವರು ಈ ಮಟ್ಟಕ್ಕೆ ಇಳಿಯುವರೆಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ; ಮುಸ್ಲಿಂ ವಿದ್ಯಾರ್ಥಿಗಳಿಗೆ ಹೊರದೇಶಕ್ಕೆ ಹೋಗಲು ಕೊಡುವ ಮೊತ್ತವನ್ನು 20 ಲಕ್ಷದಿಂದ 30 ಲಕ್ಷಕ್ಕೆ ಏರಿಸಿದ್ದಾರೆ. ಯಾಕೆ ಹಿಂದೂಗಳಲ್ಲಿ ಯಾರಿಗೂ ಕೊಡಬೇಕೆಂದು ನಿಮಗೆ ಅನಿಸಲಿಲ್ಲವೇ ಸಿದ್ದರಾಮಯ್ಯನವರೇ ಎಂದು ಕೇಳಿದರು.
ಸ್ವರಕ್ಷಣಾ ಕಲೆ ತರಬೇತಿಗೆ ಮುಸ್ಲಿಂ ಮಹಿಳೆಯರಿಗೆ ಹಣ ಮೀಸಲಿಟ್ಟಿದ್ದಾರೆ. ಯಾಕೆ ಸಿದ್ದರಾಮಯ್ಯನವರೇ, ಹಿಂದೂಗಳಲ್ಲಿರುವ ಮಹಿಳೆಯರಿಗೆ ಆತ್ಮಸ್ಥೈರ್ಯ ಕೊಡುವ ಸ್ವರಕ್ಷಣಾ ಕಲೆ ತರಬೇತಿ ಪಡೆಯಲು ಯೋಜನೆ ಕೊಡಬೇಕೆಂದು ಅನಿಸಿಲ್ಲ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿಲ್ಲ ಎಂಬುದನ್ನು ಬಿಟ್ಟರೆ, ಇನ್ನೆಲ್ಲ ಅಂಶಗಳು ಈ ಬಜೆಟ್ನಲ್ಲಿವೆ ಎಂದು ಟೀಕಿಸಿದರು. ಮದುವೆಗೆ 50 ಸಾವಿರ; ಹಿಂದೂಗಳಲ್ಲಿ ಬಡವರಿಲ್ಲವೇ ಹಾಗಿದ್ದರೆ ಎಂದು ಕೇಳಿದರು.
ಪರಿಶಿಷ್ಟರಿಗೆ ಮೀಸಲಿಟ್ಟ ಎಸ್ಇಪಿ, ಟಿಎಸ್ಪಿ ಹಣ 25 ಸಾವಿರ ಕೋಟಿಯನ್ನು ಬೇರೆ ಬೇರೆ ಕಾರ್ಯಕ್ಕೆ ವರ್ಗಾವಣೆ ಮಾಡಿದ್ದಾರೆ. ಸಾಲ 1 ಲಕ್ಷ 16 ಸಾವಿರ ಕೋಟಿಗೆ ಏರಿದೆ. ಮೊದಲ ಬಜೆಟ್ನಲ್ಲಿ ಮಿಗತೆ ಆಯವ್ಯಯ ಪತ್ರ ಕೊಟ್ಟಿದ್ದ ಸಿದ್ದರಾಮಯ್ಯನವರು ತಮ್ಮ ಅಂತಿಮ ಬಜೆಟ್ ವೇಳೆ ಬೃಹತ್ ಪ್ರಮಾಣದ ಸಾಲ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಈ ಸಂದರ್ಭದಲ್ಲಿ ಇದ್ದರು.