ಧರ್ಮಸ್ಥಳದ ಅಸಹಜ ಸಾವುಗಳ ಬಗ್ಗೆ ಮಾಧ್ಯಮಗಳುವಿಷಯವನ್ನು ಪ್ರಕಟಿಸದಂತೆ ನಿರ್ಬಂಧಕಾಜ್ಞೆ ಕೋರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯಕುಮಾರ್ ರೈ ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ನಿರ್ಬಂಧಕಾಜ್ಞೆಯನ್ನು ಹೊರಡಿಸಿದ್ದರು. ಈ ಸಂಬಂಧ ಸಲ್ಲಿಕೆಯಾಗಿರುವ ದಾವೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ವಿಜಯಕುಮಾರ್ ರೈ ಮನವಿ ಮಾಡಿದ್ದಾರೆ.
ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಕಾರ್ಯಕರ್ತರಾದ ಮುನೀರ್ ಕಾಟಿಪಳ್ಳ ಮತ್ತು ಬೈರಪ್ಪ ಹರೀಶ್ ಕುಮಾರ್ ಅವರು ಸಲ್ಲಿಸಿದ ಮಧ್ಯಂತರ ದಾವೆಯಲ್ಲಿ, ನ್ಯಾಯಾಧೀಶರ ಈ ಆದೇಶವನ್ನು ಪ್ರಶ್ನಿಸಲಾಗಿತ್ತು. ನ್ಯಾಯಾಧೀಶ ವಿಜಯಕುಮಾರ್ ರೈ 25 ವರ್ಷದ ಹಿಂದೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದವರು. ಹೆಗ್ಗಡೆ ಕುಟುಂಬದ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದವರು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಈ ಪ್ರಕರಣದ ವಿಚಾರಣೆನಡೆಸಿದರೆ ಜನರು ತೀರ್ಪಿನ ಬಗ್ಗೆ ಆರೋಪಗಳನ್ನು ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಈ ದಾವೆಯನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
ಧರ್ಮಸ್ಥಳದ ಸುತ್ತಲಿನ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಬಂಗ್ಲೆಗುಡ್ಡೆ ಎಂಬ ಸ್ಥಳದಲ್ಲಿ ದೂರುದಾರನ ಸೂಚನೆಯಂತೆ ನಡೆಸಿದ ಉತ್ಖನನದಲ್ಲಿ ಅಸ್ಥಿಪಂಜರಗಳು, ಕೆಲವು ಮೂಳೆಗಳು, ಕಟ್ಟಿದ ಸೀರೆ, ಮತ್ತು ಪುರುಷರ ಚಪ್ಪಲಿಗಳು ಸಿಕ್ಕಿವೆ. ಇಚಿಲಂಪಾಡಿ ನಿವಾಸಿಯಾದ ಜಯಂತ್ 15 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಒಬ್ಬ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ತಾವು ಪ್ರತ್ಯಕ್ಷ ಸಾಕ್ಷಿಯಾಗಿದ್ದೇವೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.