ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಈ ಹಿಂದೆ ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಆರೋಪದಿಂದ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದರೂ ಮತ್ತೆ ಆ ಪ್ರಕರಣದ ತನಿಖೆಗೆ ಆಗ್ರಹಿಸಿ ಪ್ರಶಾಂತ್ ಸಂಬರಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.
ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಕೇಸ್ (ಕ್ರೈಂ ನಂ. 243/2005) ಅನ್ನು ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಂಡಿರುವಂತೆ ಗಿರೀಶ್ ಮಟ್ಟಣ್ಣವರ್ ಕೆಲವು ವೀಡಿಯೊಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ ಕೇಸ್ ಈಗಾಗಲೇ ಕೋರ್ಟ್ನಲ್ಲಿ ಖುಲಾಸೆಯಾಗಿದ್ದರೂ ಹೊಸ ಸಾಕ್ಷ್ಯಾಧಾರ ಹಿನ್ನೆಲೆಯಲ್ಲಿ ತನಿಖೆ ನಡೆಸುವ ಅಗತ್ಯವಿದೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್ ತನಿಖೆ ವೇಳೆ, ದಾಳಿಕೋರರ ಟಾರ್ಗೆಟ್ ಧರ್ಮಸ್ಥಳ ಆಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಗಿರೀಶ್ ಮಟ್ಟಣ್ಣವರ್ ಕೂಡ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಸಕ್ರಿಯವಾಗಿದ್ದಾರೆ. ಗಿರೀಶ್ ಮಟ್ಟಣ್ಣವರ್ ಲೆಟಿನ್ ಹಾಗೂ ಇತರ ಸ್ಫೋಟಕ ವಸ್ತುಗಳಿಂದ ಬಾಂಬ್ ತಯಾರು ಮಾಡುವುದು ಸುಲಭ ಎಂದು ಹೇಳಿಕೊಂಡಿದ್ದಾರೆ, ಹಾಗಾಗಿ ಈ ಪ್ರಕರಣಗಳ ನಡುವೆ ಲಿಂಕ್ ಇದೆಯೇ ಎಂದು ತನಿಖೆಯಾಗಲಿ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ಹೇಳಿದ್ದಾರೆ. ಹದಿನೈದು ವೀಡಿಯೊಗಳ ಜೊತೆಗೆ ಈ ಸಂಬಂಧ ದಾಖಲೆಗಳನ್ನು ಪೊಲೀಸ್ ಆಯುಕ್ತರಿಗೆ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.