Menu

ಎಸ್ ಟಿ ಗೆ ಕೋಲಿ ಕಬ್ಬಲಿಗ ಸಮಾಜ ಸೇರಿಸಲು ಕೇಂದ್ರಕ್ಕೆ ನಿಯೋಗ: ಸಚಿವ ಪ್ರಿಯಾಂಕ್ ಖರ್ಗೆ

priayank kharge

ಹೊನ್ನಕಿರಣಗಿ ( ಕಲಬುರಗಿ ಜಿಲ್ಲೆ): ಕೋಲಿ ಹಾಗೂ ಕಬ್ಬಲಿಗ ಸಮಾಜವನ್ನು ಎಸ್ ಟಿ ಪಂಗಡಕ್ಕೆ ಸೇರಿಸುವಂತೆ ಕೇಂದ್ರವನ್ನು ಒತ್ತಾಯಿಸಿ ಈಗಾಗಲೇ ಪತ್ರ ಬರೆದಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ರೂ 50 ಲಕ್ಷದಲ್ಲಿ ನಿರ್ಮಾಣಗೊಂಡಿರುವ ನಿಜಶರಣ ಅಂಬಿಗರ ಚೌಡಯ್ಯ ರೈತ ಭವನ ಉದ್ಘಾಟನೆ ಹಾಗೂ ರೂ 2.40 ಕೋಟಿ‌ ವೆಚ್ಚದಲ್ಲಿ ಕೈಗೆತ್ತಿಗೊಳ್ಳಲಿರುವ ವಿವಿಧ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಈಗ ಕೇಂದ್ರದಲ್ಲಿ ಅಧಿಕಾರದಲ್ಲಿ ನಮ್ಮ‌ ಪಕ್ಷ ಇಲ್ಲ. ಆದರೂ ಕೂಡಾ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೆ ಚರ್ಚಿಸಿ ಕೇಂದ್ರ ಎತ್ತಿರುವ ಲೋಪ ಸರಿಪಡಿಸಲು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವುದಾಗಿ ಹೇಳಿದರು.

ಸಂವಿಧಾನದ ಪೀಠಿಕೆಯಲ್ಲಿ ಆರ್ಥಿಕ‌ ಹಾಗೂ ಸಾಮಾಜಿಕ ಸಮಾನತೆ ಉಲ್ಲೇಖಿಸಲಾಗಿದೆ. ಅದರಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಕೋಲಿ ಅಭಿವೃದ್ದಿ ನಿಗಮ ಎಂದು ಹೆಸರಿಟ್ಟಿತ್ತು. ಆದರೆ ಕೋಲಿ ಕಬ್ಬಲಿಗ ಮೊಗವೀರ ಇತ್ಯಾದಿ ಒಳಪಂಗಡಗಳಿಂದ ಕರೆಯಲ್ಪಡುತ್ತಿರುವುದರಿಂದ ಕೋಲಿ ಅಭಿವೃದ್ದಿ ನಿಗಮವನ್ನು ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಎಂದಿ ಬದಲಾಯಿಸಿ ಎಲ್ಲ ಒಳ ಪಂಗಡಗಳಿಗೆ ನ್ಯಾಯ ಒದಗಿಸಲಾಗಿದೆ‌ ಎಂದರು.

ಚೌಡದಾನಪುರ ಕ್ಷೇತ್ರದ ಅಭಿವೃದ್ದಿಗೆ ತಾವು ಬದ್ಧರಾಗಿರುವುದಾಗಿ ಹೇಳಿದ ಸಚಿವರು, ಬೆಂಗಳೂರಿನಲ್ಲಿ ಸೂಕ್ತ ಸ್ಥಾನದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಸ್ಥಾಪನೆಗೆ ಕ್ರಮವಹಿಸಲಾಗುವುದು ಎಂದರು.

ಜಿಲ್ಲಾ ಅಂಬಿಗರ ಚೌಡಯ್ಯ ಭವನವನ್ನು ರೂ‌ 4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸಿಎಂ ಹಾಗೂ ಖರ್ಗೆ ಸಾಹೇಬರೊಂದಿಗೆ ಮಾತನಾಡಿ ಒಂದು‌ ದಿನ ನಿಗದಿಪಡಿಸಿ ಉದ್ಘಾಟನೆ ಮಾಡಲಾಗುವುದು ಎಂದರು.

ಯುವಕರು ಅಂಬಿಗರ ಚೌಡಯ್ಯ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ‌‌ ಸಚಿವರು, ಅಂಬಿಗರ ಚೌಡಯ್ಯ ಅವರನ್ನು ನಿಜಶರಣ ಎಂದು ಕರೆಯುತ್ತಾರೆ. ಅವರ ವಚನಗಳ‌ ನೈಜ ವಾಸ್ತವಾಂಶದಿಂದ‌‌ ಕೂಡಿರುತ್ತವೆ ಎಂದರು.

ಧರ್ಮದ ವಿಷಬೀಜ ಬಿತ್ತುವ ಮೂಲಕ ಯುವಕರ ಭವಿಷ್ಯ ಹಾಳುಮಾಡುತ್ತಿದ್ದಾರೆ.‌ ಈ ಷಡ್ಯಂತ್ರಕ್ಕೆ ಈಡಿಗರು,‌ ಮೊಗವೀರರ ಸಮುದಾಯದ ಯುವಕರು ಒಳಗಾಗುತ್ತಿದ್ದಾರೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ವಿಧ್ಯಾಭ್ಯಾಸ ಕ್ಕೆ ಕಳಿಸುವ ಬಿಜೆಪಿ ನಾಯಕರು ಧರ್ಮ ರಕ್ಷಣೆಗೆ ಬಡವರ ಮಕ್ಕಳ ಬಳಸುತ್ತಾರೆ. ಈ ಬಗ್ಗೆ ಯುವಕರು ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ ವೈ ಪಾಟೀಲ್ ಮಾತನಾಡಿ ಪ್ರಿಯಾಂಕ್ ಖರ್ಗೆ ಒಬ್ಬ ವ್ಯಕ್ತಿಯಲ್ಲ ಅವರೊಬ್ಬ ಶಕ್ತಿ. ಚಿಕ್ಕ ವಯಸ್ಸಿನಲ್ಲಿಯೇ ಐಟಿ‌ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ವಹಿಸಿಕೊಂಡು‌ ಅಮೋಘ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ್ ಪಾಟೀಲ್, ಮಶಾಕ್ ಪಟೇಲ್, ಸೇರಿದಂತೆ ಹಲವರಿದ್ದರು.

Related Posts

Leave a Reply

Your email address will not be published. Required fields are marked *