ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವು ಮುಂದುವರಿದಿದ್ದು, ಸಾರ್ವಜನಿಕರಲ್ಲಿ ಭೀತಿಯುಂಟಾಗಿದೆ. ಜಿಲ್ಲೆಯಲ್ಲಿ ಕೆಲವು ವಾರಗಳಿಂದ ಹೃದಯಾಘಾತದ ಪ್ರಕರಣಗಳು ಹೆಚ್ಚಿದ್ದು,ಗುರುವಾರವೂ ಇಬ್ಬರು ಮೃತಪಟ್ಟಿದ್ದಾರೆ. ಒಂದೂವರೆ ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 35ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದ 21 ವರ್ಷದ ಮದನ್ ಚನ್ನಪಟ್ಟಣದಲ್ಲಿ ವಾಸವಿದ್ದು, ಎರಡು ದಿನಗಳಿಂದ ಚಿಕ್ಕಕೊಂಡಗುಳ ಗ್ರಾಮದ ಭಾವನ ಮನೆಗೆ ಬಂದಿದ್ದ. ಗುರುವಾರ ರಾತ್ರಿ ಎದೆನೋವಿನಿಂದ ಬಳಲಿದ್ದು, ಮನೆಯಲ್ಲಿಯೇ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಅಸು ನೀಗಿದ್ದಾನೆ.
ಹಾಸನ ನಗರದ ದಾಸರಕೊಪ್ಪಲಿನಲ್ಲಿ ವಾಸವಿದ್ದ ಬಿ.ಎನ್.ವಿಮಲಾಕ್ಷಿ (55) ಹೃದಯಾಘಾತದಿಂದ ಅಸು ನೀಗಿದ್ದಾರೆ. ವಿಮಲಾ ಸಕಲೇಶಪುರದ ತೋಟದಗದ್ದೆ ಗ್ರಾಮದವರಾಗಿದ್ದು, ಮಧುಮೇಹದಿಂದ ಬಳಲುತ್ತಿದ್ದರು. ರಾತ್ರಿ ಮಲಗಿದ್ದಲ್ಲಿಯೇ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ. ಶುಗರ್ ಲೆವೆಲ್ ಹೆಚ್ಚಾಗಿರುವ ಕಾರಣಕ್ಕೆ ಹಾರ್ಟ್ ಅಟ್ಯಾಕ್ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಒಂದೂವರೆ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 35 ಸಾವು ಆಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿ ವೈದ್ಯಕೀಯ ಸಮಿತಿ ರಚಿಸಿ ವರದಿ ನೀಡುವುದಕ್ಕೆ ಆದೇಶಿಸಿದೆ.